ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ- ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಆಶ್ರಮ ಸ್ವೀಕಾರದ ಐದನೇ ವರ್ಷದ ಸಂಭ್ರಮದ ಪ್ರಯಕ್ತ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಈ ಕುರಿತಾದ ಸಮಗ್ರ ಲೇಖನ ಇಲ್ಲಿದೆ:
ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪಟ್ಟಾಭಿಷೇಕದ ಐದನೇ ವರ್ಷದ ಸ್ಮರಣಾರ್ಥವಾಗಿ, ಉಡುಪಿಯ ಮಧ್ವ ಮಂಟಪದಲ್ಲಿ ಏಪ್ರಿಲ್ 20 ರಿಂದ 26ರ ತನಕ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾಗವತ ಸಪ್ತಾಹ ಮತ್ತು ಧಾರ್ಮಿಕ ವಿಧಿಗಳು
ಈ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿ ಪ್ರಖ್ಯಾತ ವಿದ್ವಾಂಸರಾದ ಡಾ. ಉದಯಕುಮಾರ್ ಸರಳತ್ತಾಯ ಅವರಿಂದ “ಶ್ರೀಮದ್ಭಾಗವತ ಸಪ್ತಾಹ” ಪ್ರವಚನ ನಡೆಯಲಿದೆ. ಏಳು ದಿನಗಳ ಕಾಲ ನಡೆಯುವ ಈ ಜ್ಞಾನಯಜ್ಞವು ಭಕ್ತಾದಿಗಳಿಗೆ ಪುರಾಣದ ಸಾರವನ್ನು ಮನವರಿಕೆ ಮಾಡಿಕೊಡಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕತ್ವವನ್ನು ಡಾ. ಗುರುಪ್ರಸಾದ್ ಅವರು ವಹಿಸಿಕೊಂಡಿದ್ದಾರೆ.
ಏಪ್ರಿಲ್ 20ರ ವಿಶೇಷ ಕಾರ್ಯಕ್ರಮಗಳು:
ಸಪ್ತಾಹದ ಆರಂಭದ ದಿನವಾದ ಏಪ್ರಿಲ್ 20ರಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ:
- ವಿರಜಾ ಹೋಮ: ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಶಕ್ತಿಯ ವೃದ್ಧಿಗಾಗಿ ನಡೆಸುವ ಪವಿತ್ರ ಹೋಮ.
- ತುಲಾಭಾರ ಸೇವೆ: ಶ್ರೀಗಳ ಆಶ್ರಮ ಜೀವನದ ಯಶಸ್ವಿ ಐದು ವರ್ಷಗಳ ನೆನಪಿಗಾಗಿ ವಿಶೇಷ ತುಲಾಭಾರ ಸೇವೆಯನ್ನು ಆಯೋಜಿಸಲಾಗಿದೆ.
ಉಡುಪಿ ಶೀರೂರು ಮಠದ ಪರ್ಯಾಯ 2026: ವಾಮನ ತೀರ್ಥರಿಂದ ವೇದವರ್ಧನ ತೀರ್ಥರ ತನಕ ; ಇಲ್ಲಿದೆ ಮಠದ ಇತಿಹಾಸ, ಗುರು ಪರಂಪರೆ!
ವೇದವರ್ಧನ ತೀರ್ಥರ ಕಿರು ಪರಿಚಯ
ಶೀರೂರು ಮಠದ 31ನೇ ಯತಿಗಳಾಗಿರುವ ಶ್ರೀ ವೇದವರ್ಧನ ತೀರ್ಥರು ಅತ್ಯಲ್ಪ ಕಾಲದಲ್ಲೇ ಭಕ್ತರ ಮನಗೆದ್ದವರು. ಅವರ ಬಗ್ಗೆ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ:
- ಪೂರ್ವಾಶ್ರಮ: ಇವರ ಪೂರ್ವಾಶ್ರಮದ ಹೆಸರು ಅನಿರುದ್ಧ ಸರಳತ್ತಾಯ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಿಡ್ಲೆಯವರು. ಪೂರ್ವಾಶ್ರಮದ ತಂದೆ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾದ ಡಾ. ಉದಯಕುಮಾರ್ ಸರಳತ್ತಾಯ ಅವರು.
- ಆಶ್ರಮ ಸ್ವೀಕಾರ: ಮೇ 2021ರಲ್ಲಿ ಸಂಪ್ರದಾಯಬದ್ಧವಾಗಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಅಂದಿನಿಂದ ಮಠದ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಸ್ವಾಮಿಗಳಾದ ವಿಶ್ವವಲ್ಲಭ ತೀರ್ಥರು ವೇದವರ್ಧನ ತೀರ್ಥರಿಗೆ ಸನ್ಯಾಸ ದೀಕ್ಷೆ ನೀಡಿದರು.
- ಪಾಂಡಿತ್ಯ: ಶ್ರೀಗಳು ವೇದ, ವೇದಾಂತ ಮತ್ತು ಶಾಸ್ತ್ರಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಇವರ ಸರಳ ವ್ಯಕ್ತಿತ್ವ ಮತ್ತು ಧಾರ್ಮಿಕ ನಿಷ್ಠೆ ಭಕ್ತ ವಲಯದಲ್ಲಿ ಅಪಾರ ಗೌರವಕ್ಕೆ ಪಾತ್ರವಾಗಿದೆ.
- ಪರ್ಯಾಯ ಜವಾಬ್ದಾರಿ: ಪ್ರಸ್ತುತ ಉಡುಪಿ ಕೃಷ್ಣ ಮಠದ ಪರ್ಯಾಯ ಪೀಠವನ್ನು ಅಲಂಕರಿಸಿರುವ ಇವರು, ‘ಪರ್ಯಾಯ’ ಅವಧಿಯಲ್ಲಿ ಕೃಷ್ಣನ ಪೂಜೆ ಮತ್ತು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಐದು ವರ್ಷಗಳ ಹಿಂದೆ ಆಶ್ರಮ ಸ್ವೀಕರಿಸಿದ ಶ್ರೀಗಳು, ಅಷ್ಟಮಠಗಳ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆಯನ್ನು ಒತ್ತಿದ್ದಾರೆ. ಏಪ್ರಿಲ್ 20 ರಿಂದ ನಡೆಯುವ ಈ ಭಾಗವತ ಸಪ್ತಾಹ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ಆಧ್ಯಾತ್ಮಿಕ ಪಯಣಕ್ಕೆ ಮತ್ತಷ್ಟು ಮೆರುಗು ನೀಡಲಿವೆ. ಉಡುಪಿಯ ಮಧ್ವ ಮಂಟಪವು ಈ ದಿನಗಳಲ್ಲಿ ಭಕ್ತಿ ಮತ್ತು ಜ್ಞಾನದ ಸಂಗಮ ಕ್ಷೇತ್ರವಾಗಲಿದೆ.
ಗಮನಿಸಿ: ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣನ ಮತ್ತು ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಲು ಮಠದ ವತಿಯಿಂದ ವಿನಂತಿಸಲಾಗಿದೆ.
ಲೇಖನ- ಶ್ರೀನಿವಾಸ ಮಠ









