Sri Gurubhyo Logo

Monthly Horoscope: 2023ರ ಫೆಬ್ರವರಿ ತಿಂಗಳ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮಾಸ ಭವಿಷ್ಯ

Astrologer Manjunath Bharadwaj-2
ಮಂಜುನಾಥ್ ಭಾರದ್ವಾಜ್

ಇಲ್ಲಿ  2023ನೇ ಇಸವಿಯ ಫೆಬ್ರವರಿ ತಿಂಗಳ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಮಾಸ ಭವಿಷ್ಯ ನೀಡಲಾಗಿದೆ. ಶುಭಾಶುಭ ವಿಚಾರಗಳನ್ನು ನೋಡಿಕೊಂಡು, ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮುಂಜಾಗ್ರತೆಯನ್ನು ತೆಗೆದುಕೊಳ್ಳಿ. ಫೆಬ್ರವರಿ 7ರ ವರೆಗೆ ಧನು ರಾಶಿಯಲ್ಲಿ ಬುಧ, ಏಳನೇ ತಾರೀಕಿನಂದು ಮಕರ ರಾಶಿಗೆ ಬುಧ ಪ್ರವೇಶ, ಹದಿಮೂರನೇ ತಾರೀಕು ಕುಂಭ ರಾಶಿಗೆ ರವಿ ಗ್ರಹದ ಪ್ರವೇಶ ಆಗಲಿದೆ. ಹದಿಮೂರನೇ ತಾರೀಕಿನವರೆಗೆ ಮಕರ ರಾಶಿಯಲ್ಲಿ ರವಿ ಗ್ರಹ ಇರುತ್ತದೆ. ಹದಿನೈದನೇ ತಾರೀಕಿನವರೆಗೆ ಕುಂಭದಲ್ಲಿ ಶುಕ್ರ ಇದ್ದು, ಹದಿನೈದನೇ ತಾರೀಕಿನಿಂದ ಮೀನದಲ್ಲಿ ಶುಕ್ರ ಇರುತ್ತದೆ. ಮೀನದಲ್ಲಿ ಗುರು, ಕುಂಭದಲ್ಲಿ ಶನಿ, ಮೇಷದಲ್ಲಿ ರಾಹು, ತುಲಾದಲ್ಲಿ ಕೇತು ಹಾಗೂ ವೃಷಭದಲ್ಲಿ ಕುಜ ಇರುತ್ತದೆ.

ಮೇಷ

ಉದ್ಯೋಗಿಗಳಿಗೆ ವೇತನ ಹೆಚ್ಚಳ ಆಗುವ ಸಾಧ್ಯತೆ ಇದೆ, ಪರ್ಫಾರ್ಮೆನ್ಸ್ ಲಿಂಕ್ಡ್ ಬೋನಸ್ ಬರುವಂಥ ಕೆಲಸ ಮಾಡುವಂಥವರಿಗೆ ಒಳ್ಳೆ ಬೋನಸ್, ಕಮಿಷನ್ ಬರಬಹುದು. ಇನ್ನು ಸರ್ಕಾರದಿಂದ ಬರಬೇಕಾದ ಹಣ ಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗ ಇದೆ. ಇದರ ಜತೆಗೆ ಪುಷ್ಕಳವಾದ ಭೋಜನವನ್ನು ಸವಿಯುವ ಯೋಗ ಇದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಉದ್ಯಮಗಳು, ವ್ಯಾಪಾರಸ್ಥರಿಗೆ ಬರಬೇಕಾದ ಲಾಭ ಪ್ರಮಾಣ, ಹಣ ಬರುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ಬಾರದಿರಬಹುದು ಅಥವಾ ನೀವು ಅಂದುಕೊಂಡ ಸಮಯದಲ್ಲಿ ದೊರೆಯದಿರಬಹುದು. ಆದರೆ ನೀವಾಗಿಯೇ ಮಾತಿಗೆ ಮಾತು ಕೊಟ್ಟು, ನಷ್ಟವನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ತಂದೆಯೊಂದಿಗೆ ಮನಸ್ತಾಪ ಮಾಡಿಕೊಂಡು ನಿಮಗೆ ಬರಬೇಕಾದ್ದು ಸಿಗದಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಉದ್ಯೋಗ ಬಿಡುವಂಥ ನಿರ್ಧಾರ ಮಾಡದಿರಿ. ನಿಮ್ಮ ಹುಂಬತನದ ಕಾರಣಕ್ಕೆ ಉದ್ಯೋಗ ಬದುಕಿನಲ್ಲಿ ಏರುಪೇರುಗಳಾಗುತ್ತವೆ. ವೃಥಾ ಖರ್ಚು ಮಾಡಿಕೊಳ್ಳುತ್ತೀರಿ. ಯಾವುದಾದರೂ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದು, ಸುಮ್ಮನೆ ಹೇಗಿದೆ ಅಂತ ನೋಡೋಣ ಅಂತ ಟ್ರೈ ಮಾಡಿ, ಹಾಗೇ ದುಡ್ಡು ಕಟ್ ಆಗಿಬಿಡಬಹುದು. ಗೂಗಲ್ ಪೇ, ಫೋನ್ ಪೇ ಇಂಥ ವ್ಯಾಲೆಟ್ ಗಳಿಂದ ಹಣ ಕಳಿಸುವಾಗ ಸಂಖ್ಯೆ ಹೆಚ್ಚಾಗಿ, ಅದರಿಂದ ಪರಿಚಯವೇ ಇಲ್ಲದ ವ್ಯಕ್ತಿ ಖಾತೆಗೆ ಹಣ ಹೋಗಿ, ಬಾರದಂತೆ ಆಗಬಹುದು. ಒಟ್ಟಿನಲ್ಲಿ ಸೈಬರ್ ಕ್ರಿಮಿನಲ್ ಗಳಿಂದ ವಂಚನೆ ಆಗಬಹುದು, ಜಾಗ್ರತೆಯಿಂದ ಇರಿ. ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಎಲ್ಲಿ ಯಾವ ಮಾತನ್ನು ಆಡಬಾರದೋ ಆ ಮಾತನ್ನು ಆಡಿ, ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತೀರಿ. ಯಾರ ಜತೆಗೆ ಸ್ನೇಹ ಮಾಡುತ್ತಿದ್ದೀರಿ ಎಂಬ ಬಗ್ಗೆ ಜಾಗ್ರತೆ ಇರಲಿ. ಅಲರ್ಜಿ ಸಮಸ್ಯೆಗಳು ಕಾಡಬಹುದು.

ವೃಷಭ

ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಕಿರಿಕಿರಿ, ಬೇಸರ ಮಾಡಿದರೂ ನಿಮಗೆ ಬರಬೇಕಾದ ಹಣವನ್ನು ಪಟ್ಟಾಗಿ ಕೂತು ಪಡೆದುಕೊಳ್ಳಲಿದ್ದೀರಿ. ನಿಮ್ಮ ಬುದ್ಧಿಯನ್ನು ಉಪಯೋಗಿಸಿ, ನಿಮಗೆ ಬೇಕಾದಂಥ ನಿರ್ಧಾರ, ಮಾತುಗಳನ್ನು ಎದುರಿನವರಿಂದ ಬರುವಂತೆ ಮಾಡುತ್ತೀರಿ. ಬಂಧುಗಳು, ಸ್ನೇಹಿತರಿಂದ ಕಾರ್ಯಕ್ರಮಗಳು- ಸಮಾರಂಭಗಳಿಗೆ ಆಹ್ವಾನ ಬರಲಿದೆ. ರುಚಿಕರವಾದ ಊಟ- ತಿಂಡಿ, ಜತೆಗೆ ಪ್ರಿಯವಾದವರ ಜತೆಗೆ ಸಮಯ ಕಳೆಯುವಂಥ ಯೋಗ ಇದೆ. ನಿಮಗೆ ಪುಣ್ಯ ಸಂಚಯ ಆಗಲಿದೆ. ಸಜ್ಜನರು, ಮಹಿಮಾನ್ವಿತರ ಸೇವೆ ಮಾಡುವಂಥ ಅವಕಾಶ ದೊರೆಯಲಿದೆ. ಇದರಿಂದಾಗಿ ನಿಮಗೆ ಪುಣ್ಯ ಸಂಚಯ ಇದೆ. ಪಶು ಸಾಕಣೆ, ಡೇರಿ ನಡೆಸುತ್ತಿರುವವರಿಗೆ ಹೊಸ ಹೂಡಿಕೆ ಮಾಡುವ ಯೋಗ ಇದೆ. ಜತೆಗೆ ಇವುಗಳ ಸಂಖ್ಯೆ ವೃದ್ಧಿ ಆಗುತ್ತದೆ. ಡಿಬೆಂಚರ್ ಗಳಲ್ಲಿ ಹೂಡಿಕೆ ಮಾಡಿರುವವರಿಗೆ, ಡೆಟ್ (ಸಾಲಪತ್ರಗಳಲ್ಲಿ) ಹಣ ಹೂಡಿದವರಿಗೆ ಉತ್ತಮ ರಿಟರ್ನ್ ಬರುವ ಅವಕಾಶಗಳಿವೆ. ಆದರೆ ಅದನ್ನು ಮತ್ತೆ ಹೂಡಿಕೆ ಮಾಡದಿರಿ. ನಿಮಗಿಂತ ಮೇಲಿನ ಹುದ್ದೆಯಲ್ಲಿ ಇರುವವರ ಸಲಹೆಯಿಂದ ಅಥವಾ ಅವರನ್ನು ಮೆಚ್ಚಿಸುವ ಸಲುವಾಗಿ ಮಾಡುವ ಕೆಲಸದಿಂದ ನಷ್ಟವನ್ನು ಅನುಭವಿಸುತ್ತೀರಿ. ನೀವು ಯಾರನ್ನು ನಿಮಗಿಂತ ಬುದ್ಧಿವಂತರು ಅಂತ ಭಾವಿಸಿರುತ್ತೀರೋ ಅವರ ಸಲಹೆ, ಅವರನ್ನು ಅನುಸರಿಸುವುದರಿಂದ ನಷ್ಟ ಅನುಭವಿಸುತ್ತೀರಿ. ನಿಮ್ಮ ತಂದೆಯವರು ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣವಾಗುತ್ತವೆ. ನಿಮ್ಮ ಕೆಲಸ ಮಾಡಿಕೊಡುವಂತೆ ಯಾರಿಗಾದರೂ ಹಣ ನೀಡಿ, ಅದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾರನ್ನಾದರೂ ನಂಬಿ, ಕೆಲಸ ಆಗುವ ಮುಂಚೆಯೇ ಹಣ ನೀಡದಿರಿ. ಇನ್ನು ಸ್ತ್ರೀಯರೊಂದಿಗೆ ಹಣಕಾಸಿನ ವ್ಯವಹಾರ ಬೇಡ. ರಕ್ತದೊತ್ತಡ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗಬಹುದು. ಇನ್ನು ಭೂಮಿಗೆ ಸಂಬಂಧಿಸಿದಂತೆ ಸಣ್ಣ- ಪುಟ್ಟ ಮನಸ್ತಾಪವಾದರೂ ಉದ್ಭವಿಸಬಹುದು. ಜವಾಬ್ದಾರಿಗಳನ್ನು ತಪ್ಪಿಸುತ್ತೀರಿ. ನಿಮಗೆ ಹೇಳಿದ ಕೆಲಸವನ್ನು ತಕ್ಷಣವೇ ಮಾಡಿ, ಆಲಸ್ಯವನ್ನು ಕಡ್ಡಾಯವಾಗಿ ಬಿಡಿ.

ಮಿಥುನ

ತಂದೆಯವರು ನಿಮಗೆ ಹಣ ನೀಡಿ, ಏನನ್ನಾದರೂ ಖರೀದಿಸು ಅಂತ ಹೇಳಬಹುದು. ಅಥವಾ ಅದನ್ನು ನಿಮ್ಮ ಖಾತೆಯಲ್ಲಿ ಎಫ್ ಡಿ ಮಾಡಿಕೊಳ್ಳುವಂತೆ ತಿಳಿಸಬಹುದು. ಅಥವಾ ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಹಣಕಾಸು ಹರಿವು ಹೆಚ್ಚಾಗಬಹುದು. ಮನೆಗಳನ್ನು ಕಟ್ಟುತ್ತಿರುವವರಿಗೆ ಹಣಕಾಸಿನ ಹರಿವು ಸರಾಗವಾಗಿ ಇರುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ್ದ ಹೂಡಿಕೆಗೆ ಈಗ ಉತ್ತಮ ಬೆಲೆ ಬರುತ್ತದೆ. ನಿಮ್ಮ ಬುದ್ಧಿ ಚಾತುರ್ಯದಿಂದ ಅನುಕೂಲ ಪಡೆದುಕೊಳ್ಳಲಿದ್ದೀರಿ. ಅಂದರೆ ಸವಾಲುಗಳನ್ನೇ ನಿಮಗೆ ಅನುಕೂಲವಾಗಿ ಬದಲಾಯಿಸಿಕೊಳ್ಳಲಿದ್ದೀರಿ. ಸಂಗಾತಿ ಜತೆಗೆ ಮಾತನಾಡುವಾಗ ಜಾಗ್ರತೆ ಇರಬೇಕು. ಈಗೋ ಕ್ಲಾಶ್ ಆಗಿ, ದಿನಗಟ್ಟಲೆ ಮಾತು ಬಿಡುವಂತಾಗಬಹುದು. ಸಿಟ್ಟು ಮಾಡಿಕೊಂಡು, ನಿರೀಕ್ಷೆ  ಮಾಡಿರದಂಥ ಕಠಿಣ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮಗೆ ವಹಿಸಿದ ಜವಾಬ್ದಾರಿಗಳು, ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸದೆ, ಅಂದರೆ ಡೆಡ್ ಲೈನ್ ನಲ್ಲಿ ಮುಗಿಸದೆ ನೀವು ಹಣ ಕಟ್ಟಿಕೊಡುವಂತೆ ಆಗಬಹುದು ಅಥವಾ ಬರಬೇಕಾದ ಹಣ ಬಾರದಂತೆ ಆಗಬಹುದು. ಭೂಮಿ ವ್ಯವಹಾರದಲ್ಲಿ ನಷ್ಟ ಕಾಣಲಿದ್ದೀರಿ. ಆದ್ದರಿಂದ ಆಸ್ತಿ ವ್ಯವಹಾರ ಮಾಡುವಾಗ ಆತುರ ಮಾಡಬೇಡಿ. ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಈ ಹಿಂದೆ ನಿಮ್ಮ ನಿರ್ಲಕ್ಷ್ಯದಿಂದ ನಷ್ಟ ಆಯಿತು ಎಂದು ಪರಿಹಾರ ಕೇಳಿಕೊಂಡು ಬರಬಹುದು. ತಂದೆಯವರಿಗೆ ಈಗಾಗಲೇ ಇರುವ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ನಿಮ್ಮ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರುವ ಎಲ್ಲ ಸಾಧ್ಯತೆ ಇದೆ.

ಕರ್ಕಾಟಕ

ನಿಮ್ಮ ಪ್ರತಿಸ್ಪರ್ಧಿಗಳು, ಶತ್ರುಗಳು ಮಾಡುವ ತಪ್ಪಿನಿಂದ ಹಣಕಾಸು ಆದಾಯಕ್ಕೆ ದಾರಿ ಆಗುತ್ತದೆ. ನಿಮಗೇನೋ ಸಮಸ್ಯೆ ಮಾಡುತ್ತೇವೆ ಎಂದು ಶತ್ರುಗಳು ಮಾಡುವ ಪ್ರಯತ್ನಗಳು ನಿಮಗೆ ಆದಾಯಕ್ಕೆ ಮೂಲ ಆಗುತ್ತವೆ. ಈಗಿರುವ ಸ್ಥಳಗಳಿಂದ ಬೇರೆಡೆ ಸ್ಥಳಾಂತರ ಆಗುವ ಸಾಧ್ಯತೆ ಇದೆ. ಇದನ್ನು ನಿಮ್ಮ ಅನುಕೂಲವಾಗಿ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇರುತ್ತದೆ. ಇನ್ನು ಶುಭ ವಾರ್ತೆಗಳನ್ನು ಕೇಳಲಿದ್ದೀರಿ, ವಿವಾಹಕ್ಕೆ ಪ್ರಸ್ತಾವ ಇಟ್ಟಿದ್ದು, ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದವರು ಇದ್ದಲ್ಲಿ ಮಾತುಕತೆಯಲ್ಲಿ ಪ್ರಗತಿ ಇದೆ. ವಿದೇಶಗಳಿಗೆ ಯಾವುದಾದರೂ ಪ್ರಾಜೆಕ್ಟ್ ಗಾಗಿ ಅಲ್ಪಕಾಲಕ್ಕೆ ತೆರಳಬೇಕಾಗಬಹುದು. ಪಿತ್ರಾರ್ಜಿತವಾದ ಆಸ್ತಿ ನಿರೀಕ್ಷೆಯಲ್ಲಿ ಇರುವವರಿಗೆ ಈ ವಿಚಾರದಲ್ಲಿ ಬೆಳವಣಿಗೆ ಕಾಣಬಹುದು. ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ ಸಿಗುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ಭೂಮಿ ಮೂಲಕವಾಗಿ ಲಾಭವನ್ನಂತೂ ಕಾಣುವ ಯೋಗ ಇದೆ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರ ಮಧ್ಯೆ ಮನಸ್ತಾಪ, ವಿರಸಗಳು ಉದ್ಭವಿಸಿ, ಇಷ್ಟು ಸಮಯ ಆಪ್ತರಾಗಿದ್ದವರೇ ದೂರ ಆಗುವ ಸಾಧ್ಯತೆ ಇದೆ. ದೈಹಿಕ ಆಯಾಸ ಜಾಸ್ತಿ ಆಗುತ್ತದೆ. ಇಷ್ಟು ಸಮಯ ತುಂಬ ಚಟುವಟಿಕೆಯಿಂದ ಇದ್ದೆ. ಈಗ ಸ್ವಲ್ಪ ಹೊತ್ತು ಕೆಲಸ ಮಾಡಿದರೂ ಸುಸ್ತಾಗುತ್ತಿದೆ ಎಂದೆನಿಸುತ್ತದೆ, ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಇಷ್ಟು ಸಮಯ ನಿಮಗೆ ಗೌರವ ನೀಡುತ್ತಿದ್ದವರಿಂದಲೇ ಅವಮಾನಗಳು, ತಿರಸ್ಕಾರ ಆಗುವಂತೆ ಮಾಡಿಸುತ್ತದೆ. ತಾಯಿಯೊಂದಿಗೆ ಮನಸ್ತಾಪ, ವಾಹನಗಳು ಪದೇ ಪದೇ ರಿಪೇರಿ ಇತ್ಯಾದಿ ಫಲಗಳನ್ನು ಕಾಣಲಿದ್ದೀರಿ. ಮೇಲಧಿಕಾರಿಗಳು ಜತೆಗೆ ಅಭಿಪ್ರಾಯ ಭೇದಗಳು ಉಂಟು ಮಾಡುತ್ತದೆ. ಅವರು ನಿಮ್ಮ ಬೆನ್ನ ಹಿಂದೆ ಸಮಸ್ಯೆಗಳನ್ನು ಮಾಡಬಹುದು. ಆಪ್ತರು ನಿಮ್ಮಿಂದ ದೂರ ಆಗುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ.

ಸಿಂಹ

ತಿಂಗಳ ಆರಂಭದಲ್ಲಿ ಧನ ಲಾಭ ಆಗಲಿದೆ. ಬುದ್ಧಿ ಉಪಯೋಗಿಸಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ನಿಮಗೆ ಬರಬೇಕಾದ ಹಣಕ್ಕೆ ಗಟ್ಟಿಯಾದ ಪ್ರಯತ್ನ ಹಾಕಬೇಕು. ನೆನಪಿರಲಿ, ಮೊದಲೇ ಹೇಳಿದಂತೆ ತುಂಬ ಗಟ್ಟಿಯಾದ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಸೋದರ- ಸೋದರಿಯರ ಮೂಲಕ ಹಣಕಾಸಿನ ಹರಿವಿಗೆ ಮಾರ್ಗ ಕಂಡುಬರುತ್ತದೆ. ಷೇರು ವ್ಯವಹಾರ ಮಾಡುತ್ತಿರುವವರಿಗೆ ತಿಂಗಳ ಮೊದಲಾರ್ಧದಲ್ಲಿ ಲಾಭ ಆಗಲಿದೆ. ಬಹು ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಪ್ರಿಯವಾದ ವಾರ್ತೆಯನ್ನು ಕೇಳಲಿದ್ದೀರಿ. ನಿಮ್ಮ ಜತೆಗೆ ಒಡನಾಟ ಇರುವಂಥ ವ್ಯಕ್ತಿಯೊಬ್ಬರು (ಪುರುಷರಾದರೆ ಸ್ತ್ರೀ, ಸ್ತ್ರೀಯರಾದರೆ ಪುರುಷರು) ಹತ್ತಿರ ಆಗಬಹುದು. ಆದರೆ ಸ್ನೇಹವನ್ನು, ಪ್ರೀತಿಗೆ, ಆ ನಂತರ ಮುಂದಿನ ಹಂತಕ್ಕೆ ಒಯ್ಯಲು ಸ್ವಲ್ಪ ಸಮಯವನ್ನು ನೀಡಿ, ಆತುರ ಮಾಡಬೇಡಿ. ನಿಮ್ಮ ಮಾತು, ನಡವಳಿಕೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಹೆಸರಿಗೆ ಮಸಿ ಬಳಿಯುವಂಥ ಕೆಲಸ ಆಗಬಹುದು. ಇನ್ನು ಕಣ್ಣು, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿದೆ. ಸಂಸಾರದಲ್ಲಿ ಗೊಂದಲ, ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುವಾಗ ಹಿನ್ನಡೆ, ವಿದೇಶ ಪ್ರಯಾಣ, ವ್ಯವಹಾರಗಳಲ್ಲಿ ಅಂದುಕೊಂಡಂತೆ ಬೆಳವಣಿಗೆಗಳು ಆಗದಿರುವುದು ಚಿಂತೆಗೆ ಕಾರಣ ಆಗುತ್ತದೆ. ನಿಮ್ಮ ಕೋಪದಿಂದಾಗಿ ಆಗಬೇಕಾದ ಕೆಲಸ ಆಗದಂತೆ ಮಾಡಿಕೊಳ್ಳುತ್ತೀರಿ. 

ಕನ್ಯಾ

ಸಾಫ್ಟ್ ವೇರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳುವುದಕ್ಕೆ, ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶ ಸಿಗಲಿದೆ. ನಿಮ್ಮ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡಲಿದೆ. ವಿವಿಧ ಆದಾಯ ಮೂಲಗಳಿಂದ ಆದಾಯ ಹರಿದು ಬರುವುದಕ್ಕೆ ಶುರುವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಆದಾಯ ಬರುವುದಕ್ಕೆ ದಾರಿಗಳು ಗೋಚರಿಸತೊಡಗುತ್ತವೆ. ನಿಮ್ಮ ಶತ್ರುಗಳೇ ನಿಮಗೆ ಪ್ರಚಾರ ನೀಡಲಿದ್ದಾರೆ. ಬೇರೆಯವರು ಎಸೆಯುವ ಕಲ್ಲಲ್ಲಿ ಮನೆ ಕಟ್ಟಿಕೊಳ್ಳುವವರು ಅಂತಾರಲ್ಲ, ಹಾಗೆ ಅದನ್ನೇ ನಿಮ್ಮ ಆದಾಯಕ್ಕೆ ಬಳಸಿಕೊಳ್ಳಲಿದ್ದೀರಿ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲಿಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದ ಅಸಮಾಧಾನಕ್ಕೆ ಕಾರಣ ಆಗುತ್ತದೆ. ನಿಮ್ಮ ತಂದೆಯವರು ಅಥವಾ ಪಿತೃ ಸಮಾನರಾದವರ ಜತೆಗೆ ಸಿಟ್ಟಿನಿಂದ ಮಾತುಕತೆ ಆಡುತ್ತೀರಿ. ಅಥವಾ ಅವರು ನಿಮಗೆ ಕೊಡುತ್ತೇನೆ ಎಂದಿದ್ದನ್ನು ಕೊಡದೇ ಹೋಗಬಹದು. ಅದು ಭೂಮಿ, ಹಣ ಯಾವುದಾದರೂ ಆಗಿರಬಹುದು. ಕೆಲ ಸಮಯವಾದರೂ ನೀವಿರುವ ಸ್ಥಳದಿಂದ ಬೇರೆ ಕಡೆಗೆ ಇರಬೇಕಾದಂಥ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ನಿಮ್ಮ ವಿರುದ್ಧ ಕೆಲವರು ಬೇಕೆಂತಲಾದರೂ ಅಪಪ್ರಚಾರ ಮಾಡಲಿದ್ದಾರೆ. ನೀವು ಮಾಡಿರದ ಕೆಲಸಗಳನ್ನು ನೀವೇ ಮಾಡಿದ್ದೀರಿ ಎಂದು ಹೇಳಿಕೊಂಡು ಬರುವ ಮೂಲಕ ವಿಶ್ವಾಸಾರ್ಹತೆ ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ ಪರಿಸ್ಥಿತಿ. ನೀವು ಎಷ್ಟು ರಿಟರ್ನ್ ಬರುತ್ತದೆ ಎಂದು ಅಂದಾಜು ಮಾಡಿರುತ್ತೀರೋ ಅಷ್ಟು ಬರುವುದಿಲ್ಲ. ನೀವು ಯಾರಿಂದಾದರೂ ಹೂಡಿಕೆ ಮಾಡಿಸಿದ್ದಲ್ಲಿ ಅವರಿಂದ ಮೂದಲಿಕೆ, ಬೈಗುಳ ಕೇಳಬೇಕಾಗುತ್ತದೆ.

ತುಲಾ

ಹೊಸ ಕೋರ್ಸ್ ಸೇರಬೇಕು ಅಂದುಕೊಂಡಿರುವವರಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ. ಒಟ್ಟಿನಲ್ಲಿ ಜ್ಞಾನ ವೃದ್ಧಿ ಆಗಲಿದೆ. ಈ ಹಿಂದೆ ಕೆಲಸ ಮಾಡಿದ್ದೀನಿ, ಇನ್ನೂ ಆ ಹಣ ಬಂದಿಲ್ಲ ಎಂದು ಅಲೆದಾಟ ಮಾಡುತ್ತಿರುವವರಿಗೆ ಹಣ ಕೈ ಸೇರಲಿದೆ. ಶತ್ರು ಬಾಧೆ ಕಡಿಮೆ ಆಗಲಿದೆ. ಶತ್ರುಗಳಿಂದ ನಾನಾ ಬಗೆಯಲ್ಲಿ ಹಿಂಸೆ ಆಗುತ್ತದೆ. ನಿಮ್ಮ ವಿರುದ್ಧ ಸರ್ಕಾರಕ್ಕೆ ದೂರುಗಳನ್ನು ನೀಡುವ ಸಾಧ್ಯತೆ ಇದೆ. ಈ ಹಿಂದೆ ನೀವು ನೀಡಿದ್ದ ಮಾತು, ತೆಗೆದುಕೊಂಡಿದ್ದ ಜವಾಬ್ದಾರಿ, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಗಳು ಈಗ ಕೈ ಕೊಡಲು ಆರಂಭ ಆಗುತ್ತದೆ. ಅಗ್ನಿ ಅವಘಡಗಳು ಸಂಭವಿಸಬಹುದು. ಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು. ನಿಮ್ಮ ಸುತ್ತಲೂ ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡಿಸಲಿವೆ. ಸಂಗಾತಿ ಬಗ್ಗೆ ಅನುಮಾನ, ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ಇಂಥದ್ದು ಆಗಲಿದ್ದು,ಮನಸ್ಸಿನ ನಿಯಂತ್ರಣ ತುಂಬ ಮುಖ್ಯವಾಗುತ್ತದೆ. ಏನಾದರೂ ನಿರ್ಧಾರಗಳನ್ನು ಮಾಡುವಾಗ ಸಾವಿರ ಸಲ ಯೋಚನೆ ಮಾಡಿ. ಏಕೆಂದರೆ ತಪ್ಪಾದ ನಿರ್ಧಾರಗಳು ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.

ವೃಶ್ಚಿಕ

ಫೆಬ್ರವರಿಯ ಮೊದಲ ವಾರದಲ್ಲಿ ಶುಭ ಫಲಗಳನ್ನು ಪಡೆಯಲಿದ್ದೀರಿ. ನಿಮ್ಮ ವಾಕ್ಚಾತುರ್ಯದ ಮೂಲಕ ಒಳ್ಳೊಳ್ಳೆ ಕೆಲಸಗಳು ಆಗಲಿವೆ. ಈ ತಿಂಗಳು ಹದಿನೈದನೇ ತಾರೀಕಿನ ನಂತರ ಹಣಕಾಸಿನ ಆದಾಯ ಹೆಚ್ಚಳವಾಗುತ್ತದೆ. ಎರಡನೇ ವಾರದೊಳಗೆ ಶುಭ ವಾರ್ತೆ ಕೇಳಿಬರಲಿದೆ. ವಿದೇಶಗಳಿಗೆ ಟ್ರಾನ್ಸಿಷನ್ ಗಾಗಿ ತೆರಳುವ ಸಾಧ್ಯತೆ ಇದೆ. ಅಂದರೆ ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಅಲ್ಪಾವಧಿಗೆ ತೆರಳಬಹುದು. ಆಸ್ತಿ ಮಾರಾಟದಿಂದ ಲಾಭ, ಅಥವಾ ಭೂಮಿ ಖರೀದಿ ಮಾಡುವಾಗ ಕಡಿಮೆ ಮೊತ್ತಕ್ಕೆ ಸಿಗಬಹುದು.ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ, ತಾಯಿ ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗುವಂತಾಗುತ್ತದೆ. ಸರ್ಕಾರಕ್ಕೆ ಸಂಬಂಧಿಸಿದಂತೆ ತೆರಿಗೆ, ಶುಲ್ಕ ಲೆಕ್ಕಾಚಾರ ತಪ್ಪಾಗಿದೆ ಎಂದು ನೋಟಿಸ್ ಬರುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ವಿರಸಗಳು ಸೃಷ್ಟಿ ಆಗಬಹುದು. ಅಂದಹಾಗೆ ಆತ್ಮವಿಶ್ವಾಸ ಕುಗ್ಗಲಿದೆ. ಯಾರದೋ ಮಾತು ಕೇಳಿಕೊಂಡು ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದ್ದು, ಹಣಕಾಸು ನಷ್ಟವನ್ನು ಅನುಭವಿಸಲಿದ್ದೀರಿ.

ಧನುಸ್ಸು

ನಿಮ್ಮ ತಂದೆ ಕಡೆಯಿಂದ ಅನುಕೂಲ ಆಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವಂಥ ಯೋಗ ಇದೆ. ಹೊಸ ಹೂಡಿಕೆ, ವ್ಯವಹಾರ, ವ್ಯಾಪಾರ ಶುರು ಮಾಡಬೇಕು, ವ್ಯಾಪಾರ ವಿಸ್ತರಣೆ ಮಾಡಬೇಕು ಎಂದಿರುವವರಿಗೆ ಹಣಕಾಸು ಹರಿವು ಚೆನ್ನಾಗಿ ಆಗಲಿದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲೇರಿರುವ ವ್ಯವಹಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ದಿಢೀರನೇ ಹಣಕಾಸು ಲಾಭ ಬರುವಂಥ ಯೋಗ ಇದೆ. ಆದರೆ ಇದನ್ನು ಉಳಿಸಿಕೊಳ್ಳುವುದು ಬಹಳ ಸವಾಲಿನ ಸಂಗತಿ ಆಗಿರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಬೇಕು. ನಿಮ್ಮ ಸ್ನೇಹಿತರ ಜತೆಗೆ ಭಿನ್ನಾಭಿಪ್ರಾಯಗಳು ಏರ್ಪಡಲಿವೆ. ವಿನಾಕಾರಣ ವಾದ- ವಾಗ್ವಾದ ಮುಂದವರಿಸಬೇಡಿ. ತಂದೆಯ- ತಂದೆ ಸಮಾನರಾದವರ ಆರೋಗ್ಯ, ಅವರ ಆದಾಯ ತೆರಿಗೆ, ಸಾಲ ತೀರಿಸುವ ವಿಚಾರಗಳು ನಿಮಗೆ ಚಿಂತೆ ಉಂಟು ಮಾಡುತ್ತವೆ.

ಮಕರ

ಕುಟುಂಬದಲ್ಲಿ ಸಂತಸದ ವಾತಾವರಣ ಹಣಕಾಸು ಹರಿವು ಉತ್ತಮವಾಗುತ್ತದೆ ಪ್ರಯಾಣಗಳನ್ನು ಮಾಡಲಿದ್ದೀರಿ. ಈ ಪ್ರಯಾಣದಲ್ಲಿ ಕಲಿಕೆ ಆಗುತ್ತದೆ, ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಅನಾರೋಗ್ಯ ಕಾರಣಕ್ಕೆ ತೆಗೆದುಕೊಳ್ಳುತ್ತಿರುವ ಔಷಧಿಗಳು ಕೆಲಸ ಮಾಡಲು ಆರಂಭ ಆಗುತ್ತದೆ. ನಾನಾ ವಿಧದ ಚಿಂತೆಗಳು ಕಾಡುತ್ತವೆ. ಇದು ಹೊಸ ಸಮಸ್ಯೆಗಳಿಂದ ಬರಬೇಕು ಅಂತಿಲ್ಲ. ಹಳೇ ವಿಚಾರಗಳೇ ಸಮಸ್ಯೆಗಳಾಗಿ ಕಾಡುತ್ತವೆ.  ನಿಮ್ಮ ಅತಿ ಬುದ್ಧಿವಂತಿಕೆಯಿಂದ ಅಥವಾ ನಾನು ಏನೋ ಯೋಚನೆ ಮಾಡಿ, ಹಣ ಉಳಿಸ್ತೀನಿ ಅಂತ ಹೊರಟು ಫೆಬ್ರವರಿ ಮೊದಲ ವಾರದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಕಾಣುತ್ತೀರಿ. ಹಣಕಾಸಿನ ತೀವ್ರ ಮುಗ್ಗಟ್ಟು, ಅದರಲ್ಲೂ ಆಸ್ಪತ್ರೆಗಳಿಗೆ ಖರ್ಚಿನ ಪ್ರಮಾಣ ತುಂಬ ಹೆಚ್ಚಾಗಿ, ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ. ಗಂಡುಮಕ್ಕಳಿಗೆ ತೊಂದರೆಗಳಾಗುತ್ತವೆ. ಅದರಲ್ಲೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಉದ್ಯೋಗ ಸ್ಥಳದಲ್ಲಿ ವೃಥಾ ವಿರೋಧ, ನಿಮ್ಮ ಮಾತಿನ ಮೂಲಕ ಸಮಸ್ಯೆ ತಂದುಕೊಳ್ಳುತ್ತೀರಿ. ತಾಯಿಯ ಬಗ್ಗೆ ಸುಮ್ಮಸುಮ್ಮನೆ ಸಿಟ್ಟು ಮಾಡಿಕೊಂಡು, ಅವರ ಬಗ್ಗೆ ಕೆಟ್ಟ ಮಾತುಗಳನ್ನಾಡಿ ಶಾಪಕ್ಕೆ ಗುರಿ ಆಗುತ್ತೀರಿ.

ಕುಂಭ

ಫೆಬ್ರವರಿ ಮೊದಲ ವಾರದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ವೃದ್ಧಿ ಕಾರ್ಯಗಳು ನಡೆಯುತ್ತವೆ. ಹಣಕಾಸು ಮೂಲಗಳು ಜಾಸ್ತಿ ಆಗುತ್ತವೆ. ಆದರೆ ಇವುಗಳನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗುತ್ತದೆ. ನಿಮ್ಮ ಮಾತಿಗೆ, ಶಿಫಾರಸಿಗೆ ಬೆಲೆ ಬರುತ್ತದೆ. ಕುಟುಂಬ ಸದಸ್ಯರ ಸಹಕಾರದಿಂದ ಆದಾಯ ಜಾಸ್ತಿ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಫ್ಯಾಮಿಲಿ ಬಿಜಿನೆಸ್ ಮಾಡುತ್ತಿರುವವರಿಗೆ ಉತ್ತಮ ಬೆಳವಣಿಗೆ ಇದು. ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ ಎನಿಸಿಕೊಳ್ಳುತ್ತದೆ. ಮುಖ್ಯವಾಗಿ ಸರಿಯಾದ ವೈದ್ಯರ ಪರಿಚಯ, ಸೂಕ್ತ ಔಷಧೋಪಚಾರ ದೊರೆಯಲಿದೆ. ಸ್ಟಾಕಿಸ್ಟ್ ಗಳಿಗೆ, ಅಂದರೆ ಬೆಲೆ ಜಾಸ್ತಿ ಆಗಬಹುದು ಎಂದು ಮುಂಚೆಯೇ ಅಂದಾಜು ಮಾಡಿ, ವಸ್ತುಗಳನ್ನು ದಾಸ್ತಾನು ಮಾಡಿಟ್ಟುಕೊಂಡವರಿಗೆ ಲಾಭ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ಅನಾರೋಗ್ಯ ಸಮಸ್ಯೆಗಳು ಇದ್ದರೂ ಅದು ಕಾಲಿನ ಮೇಲೆ ಪರಿಣಾಮ ಬೀರಲಿದೆ. ಮೀನಖಂಡ, ಜೀರ್ಣಾಂಗ ವ್ಯವಸ್ಥೆ ಮೇಲೆ ಅಡ್ಡ ಪರಿಣಾಮ ಬೀರಲಿದೆ. ತಂದೆಯವರ ಅನಾರೋಗ್ಯ ಚಿಂತೆಗೆ ಕಾರಣ ಆಗಲಿದೆ. ಅದಕ್ಕಾಗಿ ಬಹಳ ಹಣವನ್ನೂ ಖರ್ಚು ಮಾಡಬೇಕಾಗುತ್ತದೆ. ನಿಮಗೆ ಅಗತ್ಯ ಇಲ್ಲದಿದ್ದರೂ ಕೆಲವು ಗ್ಯಾಜೆಟ್ ಖರೀದಿಸುವಂತಾಗುತ್ತದೆ. ಅಥವಾ ಯಾವುದಾದರೂ ವಸ್ತು ಈಗಾಗಲೇ ಖರೀದಿಸಿದ್ದೀರಿ ಅದರ ವಾರಂಟಿ ಅವಧಿ ಮುಗಿದು ಕೆಲವೇ ದಿನಕ್ಕೆ ಆ ವಸ್ತು ರಿಪೇರಿಗೆ ಬಂದು, ಅದಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ತಾಯಿಯವರ ರಕ್ತದೊತ್ತಡವನ್ನು ಸರಿಯಾಗಿ ನಿಗಾ ಮಾಡಿ. ಇನ್ನು ಸಿಟ್ಟಿನ ಭರದಲ್ಲಿ ಕೆಲವು ಮಾತುಗಳನ್ನಾಡಿ ಅಥವಾ ಭರವಸೆ ನೀಡಿ, ಹಣವನ್ನು ಕಳೆದುಕೊಳ್ಳಲಿದ್ದೀರಿ. ಅದೃಷ್ಟ ಪರೀಕ್ಷೆಗೆ ಇಳಿದವರಿಗೆ ಪದೇ- ಪದೇ ನಷ್ಟ ಹಾಗೂ ತಂದೆ ಮತ್ತು ನಿಮ್ಮ ಸಂಬಂಧದ ಮಧ್ಯೆ ಮೂರನೇ ವ್ಯಕ್ತಿಗಳು ಹುಳಿ ಹಿಂಡುವ ಕೆಲಸ ಮಾಡಲಿದ್ದಾರೆ.

ಮೀನ

ದೇಹ ಸೌಖ್ಯ, ಅಂದರೆ ಆರೋಗ್ಯಕ್ಕೆ ಬೇಕಾದ ಕಾಳಜಿಯನ್ನು ತೆಗೆದುಕೊಳ್ಳಲಿದ್ದೀರಿ. ಅದಕ್ಕೆ ಗ್ರಹಗಳು ಪ್ರೇರಣೆ ನೀಡುತ್ತವೆ. ಆದಾಯದಲ್ಲಿ ವೃದ್ಧಿ ಕಾಣಲಿದ್ದೀರಿ. ಪರ್ಫಾರ್ಮೆನ್ಸ್ ಬೋನಸ್ ದೊರೆಯಬಹುದು. ನೀವು ಮಾಡಿದ ಪ್ರಾಜೆಕ್ಟ್ ಗಳಿಗೆ ಮೆಚ್ಚುಗೆ ಮೂಲಕ ಬಹುಮಾನಗಳು ಬರಬಹುದು. ಟ್ಯಾಕ್ಸ್ ರೀಫಂಡ್ ಗಾಗಿ ಅರ್ಜಿ ಹಾಕಿಕೊಂಡಿದ್ದವರಿಗೆ, ಅಥವಾ ಈಗಾಗಲೇ ಸರ್ಕಾರಿ ಸಂಸ್ಥೆಯೊಂದಕ್ಕೆ ವಸ್ತುಗಳನ್ನು ಸರಬರಾಜು ಮಾಡಿಯಾಗಿದೆ, ಅದರಿಂದ ಹಣ ಬರಬೇಕಾಗಿದೆ ಎಂದಲ್ಲಿ ಅದು ಬರುವ ಅವಕಾಶ ಹೆಚ್ಚಿದೆ. ಸಂತೋಷ ಹೆಚ್ಚಾಗುತ್ತದೆ. ವಕೀಲರಿಗೆ ದೊಡ್ಡ ಮಟ್ಟದ ಜಯ ಸಿಕ್ಕು, ಕೀರ್ತಿ ಹೆಚ್ಚಾಗಬಹುದು. ಅಷ್ಟೇ ಅಲ್ಲ, ಯಾರೆಲ್ಲ ಸಾರ್ವಜನಿಕ ಜೀವನದಲ್ಲಿ ಇರುತ್ತಾರೋ ಮನ್ನಣೆ ಜಾಸ್ತಿ ಆಗುತ್ತದೆ. ನಿರೀಕ್ಷೆಯೇ ಮಾಡದ ರೀತಿಯಲ್ಲಿ ಭೂಮಿ ಲಾಭ ಆಗಬಹುದು. ನೆನಪಿಡಿ, ಒಂದು ವೇಳೆ ತುಂಬ ಕಡಿಮೆ ಮೊತ್ತಕ್ಕೆ ಭೂಮಿ ಭೋಗ್ಯಕ್ಕೆ ಸಿಕ್ಕರೂ ಅದು ಲಾಭವೇ. ಕೆಲವು ದಂಡ ಶುಲ್ಕಗಳು ನಿಮ್ಮ ಮೇಲೆ ಬೀಳಬಹುದು. ಈ ಹಿಂದೆ ನೀವೇನೂ ಹಣ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದ ಕೆಲಸಕ್ಕೆ ಈಗ ಖರ್ಚು ಮಾಡಲೇಬೇಕಾದ ಸನ್ನಿವೇಶ ಎದುರಾಗಲಿದೆ. ವಿನಾಕಾರಣದ ಖರ್ಚು ಜಾಸ್ತಿ ಆಗುತ್ತದೆ. ಸಣ್ಣ ಜ್ವರ ಅಂತ ಡಾಕ್ಟರ್ ಹತ್ತಿರ ತೋರಿಸಿಕೊಳ್ಳುವುದಕ್ಕೆ ಹೋದರೂ ಹತ್ತಾರು ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಬರೆದುಕೊಟ್ಟು, ಅದಕ್ಕೆ ಖರ್ಚುಗಳಾಗಬಹುದು. ಸಾಲ ಬಾಧೆಗಳು ಉಂಟಾಗುತ್ತವೆ. ನಾನಾ ಬಗೆಯ ದುಃಖಗಳನ್ನು ಅನುಭವಿಸುತ್ತೀರಿ. ಇದು ನಿಮ್ಮದೇ ಕಾರಣದ ದುಃಖ ಆಗಬೇಕು ಅಂತಿಲ್ಲ. ಸ್ನೇಹಿತರು, ಸಂಬಂಧಿಕರ ಸಮಸ್ಯೆಗಳೂ ನಿಮಗೆ ದುಃಖ ತರಬಹುದು. ಚರ್ಮದ ವ್ಯಾಧಿಗಳು, ದೈವ ಶಾಪಗಳು ಅನುಭವಕ್ಕೆ ಬರುತ್ತವೆ.

ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Latest News

Related Posts