ಮೀನ ರಾಶಿಯಲ್ಲಿ ಜನಿಸಿದವರಿಗೆ ಪರಾಭವ ನಾಮ ಸಂವತ್ಸರದಲ್ಲಿ ಯುಗಾದಿ ವರ್ಷಫಲ ಹೇಗಿದೆ? ಶುಭ ಫಲಗಳು ಯಾವುವು? ಶನಿಯ ಪ್ರಭಾವ ಹೇಗಿದೆ? ಜೂನ್ ನಂತರ ಬದಲಾಗುವ ಅದೃಷ್ಟದ ಬಗ್ಗೆ ವಿಶ್ಲೇಷಣೆ ಇಲ್ಲಿದೆ. 2026ರ ವರ್ಷವು ಮೀನ ರಾಶಿಯವರಿಗೆ ತಾಳ್ಮೆ ಮತ್ತು ಧೈರ್ಯವನ್ನು ಪರೀಕ್ಷಿಸುವ ವರ್ಷವಾಗಿದ್ದರೂ ವರ್ಷದ ದ್ವಿತೀಯಾರ್ಧವು ಹೊಸ ಭರವಸೆಯನ್ನು ತರಲಿದೆ.
ಮೀನ ರಾಶಿ ಗುಣ ಸ್ವಭಾವ
ಮೀನ ರಾಶಿಯವರು ಪೂರ್ವಾಭಾದ್ರಪದ (4ನೇ ಪಾದ), ಉತ್ತರಾಭಾದ್ರಪದ ಮತ್ತು ರೇವತಿ ನಕ್ಷತ್ರದಲ್ಲಿ ಜನಿಸಿದವರು. ಗುರು ಈ ರಾಶಿಯ ಅಧಿಪತಿ. ಇವರು ಮೃದು ಸ್ವಭಾವದವರು, ಕಲ್ಪನಾಶೀಲರು ಮತ್ತು ಆಧ್ಯಾತ್ಮಿಕ ಚಿಂತನೆಯುಳ್ಳವರು. ದಯೆ ಮತ್ತು ಕರುಣೆ ಹೆಚ್ಚಾಗಿರುತ್ತದೆ. ಇತರರಿಗೆ ಸಹಾಯ ಮಾಡುವುದರಲ್ಲಿ ಸದಾ ಮುಂದು. ಇವರು ನಿಸ್ವಾರ್ಥಿಗಳು ಮತ್ತು ಜೀವನದ ಏರಿಳಿತಗಳನ್ನು ಸಮಾಧಾನದಿಂದ ಸ್ವೀಕರಿಸುವ ಗುಣ ಹೊಂದಿದ್ದಾರೆ.
ಶನಿ ಸಂಚಾರ (ಏಳೂವರೆ ಶನಿಯ ಮಧ್ಯಕಾಲ – ಜನ್ಮ ಶನಿ)
ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮದೇ ಸ್ವಂತ ರಾಶಿಯಲ್ಲೇ ಅಂದರೆ ಜನ್ಮ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದು ಏಳೂವರೆ ಶನಿಯ ಅತ್ಯಂತ ಪ್ರಮುಖವಾದ ಎರಡನೇ ಹಂತ.
- ಪರಿಣಾಮ: ಜನ್ಮ ಶನಿಯ ಪ್ರಭಾವದಿಂದ ಮಾನಸಿಕ ಒತ್ತಡ, ಕೆಲಸದಲ್ಲಿ ವಿಳಂಬ ಮತ್ತು ಅನಗತ್ಯ ಆತಂಕಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ, ವಿಶೇಷವಾಗಿ ಜೀರ್ಣಕ್ರಿಯೆ ಮತ್ತು ಮಾನಸಿಕ ವಿಶ್ರಾಂತಿಯ ಕಡೆಗೆ ಗಮನವಿರಲಿ.
- ಎಚ್ಚರಿಕೆ: ಈ ಸಮಯದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಡವಾಗಿ ದೊರೆಯಬಹುದು, ಆದರೆ ಶನಿಯು ನಿಮ್ಮನ್ನು ಶಿಸ್ತುಬದ್ಧಗೊಳಿಸುತ್ತಾನೆ.
ಗುರು ಸಂಚಾರ
ಮೀನ ರಾಶಿಯ ಅಧಿಪತಿಯಾದ ಗುರುವಿನ ಸಂಚಾರವು ಈ ವರ್ಷ ನಿಮಗೆ ದೊಡ್ಡ ಸಮಾಧಾನ ತರಲಿದೆ:
- ಜೂನ್ 1ರ ತನಕ: ಗುರುವು 4ನೇ ಮನೆಯಲ್ಲಿದ್ದು (ಮಿಥುನ) ಸುಖ ಸ್ಥಾನದಲ್ಲಿರುತ್ತಾನೆ. ಆಸ್ತಿ ಖರೀದಿ ಅಥವಾ ಮನೆಯ ನವೀಕರಣದ ಯೋಗವಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ.
- ಜೂನ್ 2ರಿಂದ ಅಕ್ಟೋಬರ್ 31: ಗುರುವು ತನ್ನ ಉಚ್ಚ ರಾಶಿಯಾದ ಕರ್ಕಾಟಕಕ್ಕೆ ಅಂದರೆ ನಿಮ್ಮ ರಾಶಿಯಿಂದ 5ನೇ ಮನೆಗೆ (ಪಂಚಮ ಗುರು) ಪ್ರವೇಶಿಸುತ್ತಾನೆ. ಇದು ಅತ್ಯಂತ ಶುಭ ಕಾಲ. ಸಂತಾನ ಭಾಗ್ಯ, ವಿದ್ಯಾಭ್ಯಾಸದಲ್ಲಿ ಪ್ರಗತಿ ಮತ್ತು ಆರ್ಥಿಕ ಸುಧಾರಣೆ ಕಂಡುಬರಲಿದೆ. ನಿಮ್ಮ ಬುದ್ಧಿವಂತಿಕೆಗೆ ಸರಿಯಾದ ಗೌರವ ಸಿಗಲಿದೆ.
- ನವೆಂಬರ್ 1ರಿಂದ ಜನವರಿ 24: ಗುರುವು 6ನೇ ಮನೆಗೆ ಪ್ರವೇಶಿಸುವುದರಿಂದ ಶತ್ರು ಬಾಧೆ ಅಥವಾ ಸಾಲದ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಇರಲಿ.
- ಜನವರಿ 25ರ ನಂತರ: ಗುರುವು ಪುನಃ 5ನೇ ಮನೆಗೆ ಬರುವುದರಿಂದ ಬಾಕಿ ಉಳಿದಿದ್ದ ಮಂಗಳ ಕಾರ್ಯಗಳು ಸುಗಮವಾಗಿ ನಡೆಯಲಿವೆ.
ರಾಹು-ಕೇತು ಸಂಚಾರ
ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು 12ನೇ ಮನೆಯಲ್ಲಿ (ಕುಂಭ) ಮತ್ತು ಕೇತು 6ನೇ ಮನೆಯಲ್ಲಿ ಸಂಚರಿಸಲಿದ್ದಾರೆ.
- ರಾಹು 12ರಲ್ಲಿ: ಅನಿರೀಕ್ಷಿತ ವಿದೇಶ ಪ್ರಯಾಣದ ಯೋಗವಿದೆ. ಆದರೆ ಖರ್ಚುಗಳು ಹೆಚ್ಚಾಗಬಹುದು. ನಿದ್ರಾಹೀನತೆ ಕಾಡದಂತೆ ಜಾಗ್ರತೆ ವಹಿಸಿ.
- ಕೇತು 6ರಲ್ಲಿ: ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ರೋಗಗಳಿಂದ ಮುಕ್ತಿ ದೊರೆಯುವ ಸಾಧ್ಯತೆ ಇದೆ.
ಡಿಸೆಂಬರ್ 5ರ ನಂತರ: ರಾಹು ನಿಮ್ಮ ರಾಶಿಯ 11ನೇ ಮನೆಗೆ ಪ್ರವೇಶಿಸುವುದರಿಂದ ಆರ್ಥಿಕವಾಗಿ ದೊಡ್ಡ ಮಟ್ಟದ ಲಾಭ ಮತ್ತು ಸಮಾಜದಲ್ಲಿ ಹೊಸ ಸಂಪರ್ಕಗಳು ಲಭಿಸಲಿವೆ.
ಪರಿಹಾರಗಳು
- ಶನಿ ಸೇವೆ: ಶನಿವಾರದಂದು ರುದ್ರಾಭಿಷೇಕ ಮಾಡಿಸಿ ಅಥವಾ ಹನುಮಂತನಿಗೆ ಸಿಂಧೂರ ಅರ್ಚನೆ ಮಾಡಿ.
- ಗುರು ಪ್ರಾರ್ಥನೆ: ಗುರುವಾರಗಳಂದು ದಕ್ಷಿಣಾಮೂರ್ತಿಯನ್ನು ಪೂಜಿಸಿ ಅಥವಾ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ.
- ದಾನ: ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ.
- ಮಂತ್ರ: ಪ್ರತಿದಿನ ‘ಓಂ ನಮೋ ನಾರಾಯಣಾಯ’ ಮಂತ್ರವನ್ನು ಪಠಿಸಿ.
Pisces Personality: ಮೀನ ರಾಶಿಯವರ ಗುಣ-ಸ್ವಭಾವ ಹೇಗಿರುತ್ತೆ? ಇವರಿಗೆ ಅದೃಷ್ಟ ತರುವ ರತ್ನ ಯಾವುದು?
ಕೊನೆಮಾತು
“ಜನ್ಮ ಶನಿಯ ಪ್ರಭಾವವಿದ್ದರೂ ಜೂನ್ ನಂತರ ಬರುವ ಪಂಚಮ ಗುರುವಿನ ಬಲವು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಧೈರ್ಯದಿಂದ ಮುನ್ನಡೆಯಿರಿ.”
ಲೇಖನ– ಶ್ರೀನಿವಾಸ ಮಠ





