ಸನಾತನ ಧರ್ಮದಲ್ಲಿ ಹೋಮ-ಹವನಗಳು ಕೇವಲ ಧಾರ್ಮಿಕ ವಿಧಿಗಳಲ್ಲ, ಅವು ವಿವಿಧ ದೋಷಗಳಿಗೆ ಪರಿಣಾಮಕಾರಿ ಆಧ್ಯಾತ್ಮಿಕ ಪರಿಹಾರಗಳಾಗಿವೆ. ಜಾತಕದಲ್ಲಿನ ಗ್ರಹ ದೋಷ, ಪಿತೃ ಶಾಪ, ಆರ್ಥಿಕ ಸಂಕಷ್ಟ ಅಥವಾ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರವಾಗಿ ಶಾಸ್ತ್ರಗಳಲ್ಲಿ ವಿವಿಧ ಶಾಂತಿ- ಹೋಮಗಳನ್ನು ಸೂಚಿಸಲಾಗಿದೆ. ಮಹಾ ಮೃತ್ಯುಂಜಯ ಹೋಮ ಆಯುಷ್ಯ ವೃದ್ಧಿಗೆ ಸಹಕಾರಿಯಾದರೆ, ಮನೋ ವಾಂಚಿತ ಗಣಹೋಮ ಇಷ್ಟಾರ್ಥಗಳ ಸಿದ್ಧಿಗೆ ನಾಂದಿ ಹಾಡುತ್ತದೆ. ಹಾಗೆಯೇ, ಜೀವನದ ಪ್ರಮುಖ ಘಟ್ಟಗಳಾದ ಷಷ್ಠಿಪೂರ್ತಿ ಮತ್ತು ಭೀಮರಥ ಶಾಂತಿಹೋಮಗಳು ವ್ಯಕ್ತಿಯ ಅರಿಷ್ಟ ನಿವಾರಿಸಿ ಸುಖ-ಶಾಂತಿ ನೀಡುತ್ತವೆ. ಪ್ರೇತಬಾಧೆ, ಶತ್ರು ಭಯ ಅಥವಾ ವಾಹನ ಅಪಘಾತಗಳಂತಹ ಅನಿರೀಕ್ಷಿತ ಸಂಕಷ್ಟಗಳಿಂದ ಪಾರಾಗಲು ಈ ಪವಿತ್ರ ಯಜ್ಞಗಳ ಮಹತ್ವ ಮತ್ತು ಫಲಶ್ರುತಿಯನ್ನು ತಿಳಿಯುವುದು ಅತ್ಯಗತ್ಯ. ಯಾವುದೇ ಪೂಜೆ-ಪುರಸ್ಸರಾದಿಗಳನ್ನು ‘ಕಾಮ್ಯಾರ್ಥ’ಗಳೊಂದಿಗೆ ಮಾಡುವುದು ಬೇರೆ, ಯಾವುದೇ ‘ಕಾಮ್ಯಾರ್ಥ’ ಬಯಸದೆ ಮಾಡುವುದು ಬೇರೆ. ಇಲ್ಲಿ ಉಲ್ಲೇಖ ಮಾಡಿರುವ ಹೋಮಗಳು ಆಯಾ ಕಾಮ್ಯಾರ್ಥ ನೆರವೇರಿಸುತ್ತವೆ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖ ಆಗಿದೆ.
1. ಇಷ್ಟಾರ್ಥ ಸಿದ್ಧಿ ಮತ್ತು ಕೌಟುಂಬಿಕ ಅಭಿವೃದ್ಧಿಗಾಗಿ
- ಮನೋ ವಾಂಚಿತ ಗಣಹೋಮ: ಇಚ್ಛಾಪೂರ್ಣತೆ ಹಾಗೂ ಮನೋಕಾಮನೆಗಳ ಸಿದ್ಧಿಗಾಗಿ.
- ಗಣಪತಿ ಹೋಮ: ಸಕಲ ಕಾರ್ಯಗಳ ಸಾಧನೆ, ವೃತ್ತಿಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆಯಲು.
- ಶ್ರೀ ವಿಷ್ಣು ಸಹಸ್ರನಾಮ ಹೋಮ: ಕುಟುಂಬದ ಅಭಿವೃದ್ಧಿ, ಸಂತೋಷ ಮತ್ತು ಸಮೃದ್ಧಿಗಾಗಿ.
- ಶ್ರೀ ಲಲಿತಾ ಹೋಮ: ಮನೆಯ ನೆಮ್ಮದಿ ಮತ್ತು ಶಾಂತಿಗಾಗಿ.
- ಶ್ರೀ ಗಾಯತ್ರಿ ಹೋಮ: ಸಕಲ ಪಾಪಗಳ ನಿವೃತ್ತಿ ಮತ್ತು ದುಷ್ಟರ ನಾಶಕ್ಕಾಗಿ.
ಮನೆಯಲ್ಲಿ ಸುಖ-ಶಾಂತಿ ನೆಲೆಸಲು ‘ವಾಸ್ತು ಬಲಿಹರಣ’ ಯಾವ ಸಂದರ್ಭಗಳಲ್ಲಿ ಅನಿವಾರ್ಯ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ
2. ಆರೋಗ್ಯ ಮತ್ತು ಆಯುಷ್ಯ ರಕ್ಷಣೆಗಾಗಿ
- ಮಹಾ ಮೃತ್ಯುಂಜಯ ಹೋಮ: ಮರಣಾವಸ್ಥೆಯಲ್ಲಿರುವವರಿಗೆ ಮತ್ತು ತೀವ್ರತರದ ವ್ಯಾಧಿಗಳ ನಿವಾರಣೆಗೆ.
- ಅಭಯಂಕರ ಹೋಮ: ದೀರ್ಘವ್ಯಾಧಿ, ಕುಷ್ಟ ಮತ್ತು ಚರ್ಮವ್ಯಾಧಿಗಳ ನಿವಾರಣೆಗೆ.
- ಶ್ರೀ ರುದ್ರ ಹೋಮ: ಕಠಿಣ ಜ್ವರದ ಬಾಧೆ ನೀಗಿ ಶರೀರ ಸೌಖ್ಯ ಪಡೆಯಲು.
- ಧನ್ವಂತ್ರಿ ಹೋಮ: ಸಂಪೂರ್ಣ ಆರೋಗ್ಯ ವೃದ್ಧಿಗಾಗಿ.
- ಸೂರ್ಯ ನಾರಾಯಣ ಹೋಮ: ಆರೋಗ್ಯ ವೃದ್ಧಿ, ದೇಹ ಬಲ ಮತ್ತು ದೃಷ್ಟಿ ದೋಷ ನಿವಾರಣೆಗಾಗಿ.
- ವಾಯು ಹೋಮ: ವಾಯು ಸಂಬಂಧ ವ್ಯಾಧಿಗಳ ನಿವಾರಣೆಗಾಗಿ.
- ಗುಹ್ಯ ಕಾಳಿ ಹೋಮ: ಸ್ತ್ರೀ-ಪುರುಷರ ಗುಪ್ತಾಂಗ ರೋಗಗಳ ನಿವಾರಣೆಗೆ.
3. ರಕ್ಷಣೆ ಮತ್ತು ದುಷ್ಟಶಕ್ತಿ ನಿಗ್ರಹಕ್ಕಾಗಿ
- ಮಹಾ ಸುದರ್ಶನ ಹೋಮ: ಅಬಿಚಾರ ದೋಷ, ಪ್ರೇತಬಾಧೆ ಮತ್ತು ಸಮ್ಮೋಹನ ಕ್ರಿಯೆಗಳ ನಿವಾರಣೆಗೆ.
- ದುರ್ಗಾ ಹೋಮ: ಕೃತ್ರಿಮ (ಮಾಟ) ಮತ್ತು ಮಹಾ ಅನಿಷ್ಟಗಳ ಪರಿಹಾರಕ್ಕೆ.
- ನಿರುತಿ ಹೋಮ: ಗೃಹದಲ್ಲಿರುವ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ.
- ತ್ವರಿತ ಹೋಮ: ಕೆಟ್ಟ ಕನಸು, ಪ್ರೇತಬಾಧೆ ಮತ್ತು ಗಾಳಿ ಸೋಕುಗಳ ನಿವಾರಣೆಗೆ.
- ರಕ್ಷೋಜ್ಞ ಹೋಮ: ಮನೆ ನಿರ್ಮಾಣ ಕಾಲದಲ್ಲಿ ಬಲಿಯಾದ ಜೀವ ಜಂತುಗಳ ಆತ್ಮಶಾಂತಿಗಾಗಿ.
- ಅಘೋರ ಹೋಮ: ಪ್ರಾಣಿ-ಪಕ್ಷಿಗಳು ಅನಿರೀಕ್ಷಿತವಾಗಿ ಮನೆ ಪ್ರವೇಶಿಸುವುದರಿಂದ ಉಂಟಾಗುವ ದೋಷಗಳ ನಿವಾರಣೆಗೆ.
ಅಶ್ವಾರೂಢ ಸ್ವಯಂವರ ಪಾರ್ವತಿ ಹೋಮ: ಶೀಘ್ರ ವಿವಾಹ ಮತ್ತು ದಾಂಪತ್ಯ ಸುಖಕ್ಕಾಗಿ ದಿವ್ಯ ಮಾರ್ಗ
4. ಅಪಘಾತ ಮತ್ತು ದೋಷಗಳ ಪರಿಹಾರಕ್ಕಾಗಿ
- ತ್ರಯಂಭಕ ಹೋಮ: ಆಕಸ್ಮಿಕ ಮರಣಗಳ ಭಯ ನಿವಾರಣೆಗೆ.
- ಸುಬ್ರಹ್ಮಣ್ಯ ಹಾಗೂ ವಹ್ನಿ ಹೋಮ: ಶಸ್ತ್ರ ಚಿಕಿತ್ಸೆ (Operation) ಮತ್ತು ವಾಹನ ಅಪಘಾತಗಳಿಂದ ರಕ್ಷಣೆ ಪಡೆಯಲು.
- ಶ್ರೀ ದುರ್ಗಾ ಹೋಮ: ಅಪಘಾತ, ರಾಹು ಗ್ರಹ ಪೀಡೆ ಪರಿಹಾರ ಮತ್ತು ಗರ್ಭ ದೋಷಗಳಿಗೆ.
- ತ್ರಿಪುರದಲ ಹೋಮ: ಶಸ್ತ್ರಚಿಕಿತ್ಸೆಗಳ (Operation) ಯಶಸ್ಸಿನ ಸಿದ್ಧಿಗಾಗಿ.
5. ಗ್ರಹ ದೋಷ ಮತ್ತು ಪಿತೃ ಕಾರ್ಯಗಳು
- ನವಗ್ರಹ ಹೋಮ: ಸಕಲ ಆರೋಗ್ಯ, ಸಂಕಷ್ಟ ನಿವಾರಣೆ ಮತ್ತು ನವಗ್ರಹ ದೋಷಗಳಿಗೆ.
- ಅಶ್ಲೇಷಬಲಿ ಹಾಗೂ ಗರುಡ ಹೋಮ: ಸರ್ಪದೋಷ ನಿವಾರಣೆ, ಶೀಘ್ರ ವಿವಾಹ ಮತ್ತು ಸರ್ಪಪೀಡೆ ತಡೆಯಲು.
- ನಾರಾಯಣ ಬಲಿ: ಪ್ರೇತಬಾಧೆ, ಪ್ರಕೃತಿ ವಿರೋಧ ಮರಣಗಳಿಗೆ ಶಾಂತಿ ನೀಡಲು.
- ವೈವಸ್ವತ ಹೋಮ: ಪಿತೃಶಾಪ ಮತ್ತು ಮಾತೃಶಾಪಗಳ ನಿವಾರಣೆಗಾಗಿ.
- ಚಂಡಿಕೇಶ್ವರ ಹೋಮ: ಬಾಲಗ್ರಹ ದೋಷಗಳ ನಿವಾರಣೆಗಾಗಿ.
- ಗೋಮುಖ ಪ್ರಸವ ಶಾಂತಿ: ದುಷ್ಟ ನಕ್ಷತ್ರದಲ್ಲಿ ಜನಿಸಿದ ಮಕ್ಕಳ ಶಾಂತಿಗಾಗಿ.
- ಕೂಷ್ಮಾಂಡ ಹೋಮ: ಮಹಾ ಪ್ರಾಯಶ್ಚಿತ್ತ ಕರ್ಮಕ್ಕಾಗಿ.
- ವರುಣ ಹೋಮ: ಸಾಲದ ಬಾಧೆ ನಿವಾರಣೆಗಾಗಿ.
ಮನೆ ಕಟ್ಟುವಾಗ ನಾಗರ ಹಾದಿ ಮುಚ್ಚಿದರೆ ಅಪಾಯ ತಪ್ಪಿದ್ದಲ್ಲ! ಏನಿದು ಸರ್ಪ ವೀಥಿ ನಿರೋಧನ ದೋಷ?
6. ವಯೋಮಾನಕ್ಕೆ ಅನುಗುಣವಾದ ಶಾಂತಿ ಹೋಮಗಳು
- ಷಷ್ಠಿಪೂರ್ತಿ / ಉಗ್ರರಥ ಶಾಂತಿ: 60ನೇ ವರ್ಷದಲ್ಲಿ ಆಯುಷ್ಯ ವೃದ್ಧಿಗಾಗಿ.
- ಭೀಮರಥ ಶಾಂತಿ: 70ನೇ ವರ್ಷ ಪೂರೈಸಿದ ಸಂದರ್ಭದಲ್ಲಿ.
- ಸಹಸ್ರ ಚಂದ್ರ ದರ್ಶನ ಶಾಂತಿ: 80ನೇ ವಯಸ್ಸಿನಲ್ಲಿ (1000 ಪೂರ್ಣಚಂದ್ರರನ್ನು ನೋಡಿದ ಸೌಭಾಗ್ಯಕ್ಕಾಗಿ).
ಲೇಖನ- ಶ್ರೀನಿವಾಸ ಮಠ





