2026ರ ಮಾರ್ಚ್ 19ರಿಂದ ಆರಂಭ ಆಗಲಿರುವ ‘ಪರಾಭವ ನಾಮ ಸಂವತ್ಸರ’ವು ವೃಷಭ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಈ ವರ್ಷ ಗ್ರಹಗತಿಗಳ ಸಂಚಾರವು ಅತ್ಯಂತ ಕುತೂಹಲಕಾರಿಯಾಗಿದ್ದು, ವಿಶೇಷವಾಗಿ ಶನೈಶ್ಚರ ಲಾಭ ಸ್ಥಾನದಲ್ಲಿ ಸಂಚರಿಸಲಿದ್ದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ? ವರ್ಷವಿಡೀ ಬದಲಾಗುವ ಗುರುವಿನ ಸಂಚಾರದಿಂದ ನಿಮಗೆ ‘ಗುರು ಬಲ’ ಸಿಗಲಿದೆಯೇ? ವೃತ್ತಿ ಜೀವನದಲ್ಲಿ ರಾಹು-ಕೇತುಗಳ ಎಫೆಕ್ಟ್ ಹೇಗಿರಲಿದೆ? ನಿಮ್ಮ ಆದಾಯ, ಆರೋಗ್ಯ ಮತ್ತು ಕುಟುಂಬದ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ಈ ಸಂವತ್ಸರದ ರಾಶಿ ಭವಿಷ್ಯವನ್ನು ಈಗಲೇ ಓದಿರಿ.
ವೃಷಭ ರಾಶಿಯವರ ಗುಣ ಸ್ವಭಾವ
ವೃಷಭ ರಾಶಿಯವರು ಕೃತಿಕಾ (2, 3, 4ನೇ ಪಾದ), ರೋಹಿಣಿ ಮತ್ತು ಮೃಗಶಿರಾ ನಕ್ಷತ್ರದ ಮೊದಲ ಎರಡು ಪಾದಗಳಲ್ಲಿ ಜನಿಸಿದವರು. ಶುಕ್ರ ಇವರ ರಾಶ್ಯಾಧಿಪತಿ ಆಗಿರುವುದರಿಂದ ಇವರು ಸೌಮ್ಯ ಸ್ವಭಾವದವರು, ಕಲಾಪ್ರೇಮಿಗಳು ಮತ್ತು ಸ್ಥಿರ ಮನಸ್ಸಿನವರು. ಜೀವನದ ಭೋಗ-ಭಾಗ್ಯಗಳನ್ನು ಅನುಭವಿಸಲು ಇಷ್ಟಪಡುವ ಇವರು, ಕಷ್ಟಪಟ್ಟು ದುಡಿಯುವ ಮತ್ತು ತಾಳ್ಮೆಯಿಂದ ಗುರಿ ತಲುಪುವ ಗುಣ ಹೊಂದಿದ್ದಾರೆ. ಒಮ್ಮೆ ನಿರ್ಧಾರ ಮಾಡಿದರೆ ಅದಕ್ಕೆ ಅಂಟಿಕೊಳ್ಳುವ ಹಠದ ಗುಣ ಇವರಲ್ಲಿ ಕಂಡುಬರುತ್ತದೆ. ನಂಬಿಕಸ್ಥರಾದ ಇವರು ಸ್ನೇಹಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. ಸುಂದರ ವಸ್ತುಗಳ ಬಗ್ಗೆ ಇವರಿಗೆ ಒಲವು ಹೆಚ್ಚು.
ಶನಿ ಸಂಚಾರ
ಈ ಸಂವತ್ಸರದ ಉದ್ದಕ್ಕೂ ಶನಿ ಗ್ರಹವು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ವೃಷಭ ರಾಶಿಯವರಿಗೆ ಇದು ಅತ್ಯಂತ ಶುಭದಾಯಕ ಕಾಲ. ಶನಿಯು ಲಾಭ ಸ್ಥಾನದಲ್ಲಿ ಇರುವುದರಿಂದ ಆರ್ಥಿಕವಾಗಿ ದೊಡ್ಡ ಮಟ್ಟದ ಅಭಿವೃದ್ಧಿ ಕಾಣುವಿರಿ. ಹಳೆಯ ಬಾಕಿ ವಸೂಲಿ ಆಗಲಿದೆ ಮತ್ತು ಸ್ಥಿರ ಆಸ್ತಿಯಿಂದ ಲಾಭ ಉಂಟಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದ್ದು, ರಾಜಕೀಯ ಅಥವಾ ಉನ್ನತ ಹುದ್ದೆಯಲ್ಲಿ ಇರುವವರಿಗೆ ಯಶಸ್ಸು ಖಚಿತ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಶನಿಯ ಈ ಸಂಚಾರವು ನಿಮ್ಮ ಶ್ರಮಕ್ಕೆ ಪೂರ್ಣ ಫಲವನ್ನು ನೀಡಲಿದ್ದು, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ.
ಗುರು ಸಂಚಾರ
ಈ ವರ್ಷ ಗುರುವಿನ ಸಂಚಾರವು ಮಿಶ್ರ ಫಲಗಳನ್ನು ನೀಡಲಿದೆ. ಜೂನ್ 1ರ ತನಕ ಗುರು ನಿಮ್ಮ ರಾಶಿಯಿಂದ 2ನೇ ಮನೆಯಲ್ಲಿ (ಮಿಥುನ) ಇರುವುದರಿಂದ ಧನಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಜೂನ್ 2ರಿಂದ ಅಕ್ಟೋಬರ್ 31ರ ತನಕ ಗುರುವು 3ನೇ ಮನೆಗೆ (ಕರ್ಕಾಟಕ) ಪ್ರವೇಶಿಸುವುದರಿಂದ ಸಣ್ಣಪುಟ್ಟ ಪ್ರಯಾಣಗಳು ಹೆಚ್ಚಾಗಲಿವೆ ಮತ್ತು ಧೈರ್ಯದಿಂದ ಕೆಲಸಗಳನ್ನು ಪೂರೈಸುವಿರಿ. ನವೆಂಬರ್ 1ರಿಂದ ಜನವರಿ 24ರ ತನಕ ಗುರುವು 4ನೇ ಮನೆಗೆ (ಸಿಂಹ) ಬರುವುದರಿಂದ ವಾಹನ ಸೌಖ್ಯ ಮತ್ತು ಗೃಹ ನಿರ್ಮಾಣದ ಯೋಗವಿದೆ. ಜನವರಿ 25ರ ನಂತರ ಪುನಃ ಗುರುವು 3ನೇ ಮನೆಗೆ ಬರುವುದರಿಂದ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಲಿವೆ.
ರಾಹು-ಕೇತು ಸಂಚಾರ
ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ನಿಮ್ಮ ರಾಶಿಯಿಂದ 10ನೇ ಮನೆಯಲ್ಲಿ (ಕುಂಭ) ಮತ್ತು ಕೇತುವು 4ನೇ ಮನೆಯಲ್ಲಿ (ಸಿಂಹ)ಸಂಚರಿಸಲಿದ್ದಾರೆ. ಇದರಿಂದ ವೃತ್ತಿ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಕಂಡುಬರಲಿದ್ದರೂ ಅತಿಯಾದ ಕೆಲಸದ ಒತ್ತಡದಿಂದ ಮಾನಸಿಕ ನೆಮ್ಮದಿ ಕೊಂಚ ಕಡಿಮೆಯಾಗಬಹುದು. ಮನೆಯ ಸುಖ-ಶಾಂತಿಯ ಮೇಲೆ ಕೇತುವಿನ ಪ್ರಭಾವವಿರುವುದರಿಂದ ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ಆದರೆ, ಡಿಸೆಂಬರ್ 5ರ ನಂತರ ರಾಹುವು 9ನೇ ಮನೆಗೆ (ಮಕರ) ಮತ್ತು ಕೇತುವು 3ನೇ ಮನೆಗೆ (ಕರ್ಕಾಟಕ) ಪ್ರವೇಶಿಸುತ್ತಾರೆ. ಈ ಬದಲಾವಣೆಯು ಭಾಗ್ಯೋದಯಕ್ಕೆ ಕಾರಣವಾಗಲಿದೆ. ಆಧ್ಯಾತ್ಮಿಕ ಯಾತ್ರೆಗಳು ಕೈಗೂಡಲಿವೆ ಮತ್ತು ಸಹೋದರ-ಸಹೋದರಿಯರಿಂದ ಹೆಚ್ಚಿನ ಸಹಕಾರ ಲಭಿಸಲಿದೆ.
ಪರಿಹಾರಗಳು
- ಶುಕ್ರ ಶಾಂತಿ: ಪ್ರತಿ ಶುಕ್ರವಾರ ಮಹಾಲಕ್ಷ್ಮಿಯ ದರ್ಶನ ಮಾಡಿ ಅಥವಾ ಲಲಿತಾ ಸಹಸ್ರನಾಮ ಪಠಿಸಿ.
- ಗುರು ಸೇವೆ: ಗುರುವಾರಗಳಂದು ದಕ್ಷಿಣಾಮೂರ್ತಿಗೆ ಅಥವಾ ದತ್ತಾತ್ರೇಯರ ಸ್ಮರಣೆ ಮಾಡಿ, ಕಡಲೇಕಾಳು ದಾನ ಮಾಡಿ.
- ದಾನ: ಬಡ ವಿದ್ಯಾರ್ಥಿಗಳಿಗೆ ಓದಲು ಬೇಕಾದ ಪುಸ್ತಕ ಅಥವಾ ಲೇಖನ ಸಾಮಗ್ರಿಗಳನ್ನು ದಾನ ಮಾಡಿ.
- ಮಂತ್ರ: ಪ್ರತಿದಿನ ‘ಓಂ ಶುಂ ಶುಕ್ರಾಯ ನಮಃ’ ಮಂತ್ರವನ್ನು 33 ಬಾರಿ ಜಪಿಸಿ.
ಸಕಲ ಪಾಪ ಹರಿಸುವ 12 ಜ್ಯೋತಿರ್ಲಿಂಗಗಳು; ಎಲ್ಲೆಲ್ಲಿವೆ? ಏನು ಇವುಗಳ ಮಹಿಮೆ?
ಕೊನೆಮಾತು
“ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳು ಬರಲಿದ್ದು, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ತಾಳ್ಮೆಯಿಂದ ಹೆಜ್ಜೆ ಇಡಿ.”
ಲೇಖನ- ಶ್ರೀನಿವಾಸ ಮಠ





