ವೈಶಾಖ ಮಾಸಕ್ಕೆ ‘ಮಾಧವ ಮಾಸ’ ಎಂಬ ಹೆಸರಿದೆ. ಈ ವರ್ಷ ಏಪ್ರಿಲ್ 1 ರಿಂದ ಮೇ 1ರ ವರೆಗೆ (ಚೈತ್ರ ಪೂರ್ಣಿಮೆಯಿಂದ ವೈಶಾಖ ಪೂರ್ಣಿಮೆಯವರೆಗೆ) ವೈಶಾಖ ಸ್ನಾನದ ಪುಣ್ಯಕಾಲ ಇರುತ್ತದೆ. ಈ ಒಂದು ತಿಂಗಳು ಶ್ರದ್ಧಾ-ಭಕ್ತಿಯಿಂದ ಆಚರಿಸುವ ಸ್ನಾನ ಮತ್ತು ದಾನಗಳು ಮನುಷ್ಯನ ಜನ್ಮಜನ್ಮಾಂತರದ ಪಾಪಗಳನ್ನು ನೀಗಿಸಿ, ಅಕ್ಷಯ ಪುಣ್ಯವನ್ನು ತಂದುಕೊಡುತ್ತವೆ ಎಂಬ ನಂಬಿಕೆಯಿದೆ.
ವೈಶಾಖ ಸ್ನಾನದ ವಿಧಿ ಮತ್ತು ಸಂಕಲ್ಪ
ವೈಶಾಖ ಮಾಸದಲ್ಲಿ ಸೂರ್ಯೋದಯಕ್ಕಿಂತ ಮುಂಚೆಯೇ ನದಿ, ಸರೋವರ ಅಥವಾ ಮನೆಯಲ್ಲಿಯೇ ಪವಿತ್ರ ಜಲದಿಂದ ಸ್ನಾನ ಮಾಡುವುದು ಶ್ರೇಷ್ಠ. ಸ್ನಾನಕ್ಕೆ ಮುನ್ನ ಈ ಕೆಳಗಿನ ಸಂಕಲ್ಪ ಮಂತ್ರವನ್ನು ಪಠಿಸಬೇಕು:
ವೈಶಾಖಂ ಸಕಲಂ ಮಾಸಂ ಮೇಷಸಂಕ್ರಮಣೇ ರವೇಃ |
ಪ್ರಾತಃ ಸವಿಯಮಃ ಸ್ನಾಸ್ಯೇ ಪ್ರೀತೋಸ್ತು ಮಧುಸೂದನಃ ||
ಮಧುಹಂತುಃ ಪ್ರಸಾದೇನ ಬ್ರಾಹ್ಮಣಾನಾಮನುಗ್ರಹಾತ್ |
ನಿರ್ವಿಘ್ನಮಸ್ತು ಮೇ ಪುಣ್ಯಂ ವೈಶಾಖಸ್ನಾನಮನ್ವಹಮ್ ||
ಅರ್ಥ: ಸೂರ್ಯನು ಮೇಷ ರಾಶಿಯಲ್ಲಿ ಇರುವಾಗ, ಪೂರ್ಣ ವೈಶಾಖ ಮಾಸದಲ್ಲಿ ಮುಂಜಾನೆ ನಿಯಮಬದ್ಧವಾಗಿ ಸ್ನಾನ ಮಾಡುತ್ತೇನೆ. ಇದರಿಂದ ಮಧುಸೂದನನು ಪ್ರೀತನಾಗಲಿ. ಭಗವಂತನ ಪ್ರಸಾದ ಮತ್ತು ಬ್ರಾಹ್ಮಣರ ಅನುಗ್ರಹದಿಂದ ನನ್ನ ಈ ದೈನಂದಿನ ವೈಶಾಖ ಸ್ನಾನದ ಪುಣ್ಯವು ನಿರ್ವಿಘ್ನವಾಗಿ ನೆರವೇರಲಿ.
ಸ್ನಾನದ ನಂತರ ದೇವರಿಗೆ ಅರ್ಘ್ಯ ಮತ್ತು ಪಿತೃಗಳಿಗೆ ತರ್ಪಣ ನೀಡುವುದರಿಂದ ವಿಶೇಷ ಫಲ ಲಭಿಸುತ್ತದೆ.
ವೈಶಾಖ ಮಾಸದಲ್ಲಿ ನೀಡುವ ದಾನಗಳು ಮತ್ತು ಅವುಗಳ ಫಲ
ವೈಶಾಖ ಮಾಸವು ಬೇಸಿಗೆಯ ಕಾಲವಾದ್ದರಿಂದ, ಈ ಸಮಯದಲ್ಲಿ ಜೀವಕುಲದ ತಂಪಿಗಾಗಿ ಮಾಡುವ ದಾನಗಳಿಗೆ ಅಪಾರ ಮಹತ್ವವಿದೆ. ವಿವಿಧ ದಾನಗಳು ಮತ್ತು ಅವುಗಳ ಫಲಗಳು ಹೀಗಿವೆ:
| ದಾನ | ಲಭಿಸುವ ಫಲ |
| ಜಲದಾನ (ನೀರು) | ಹಲ್ಲಿ ಜನ್ಮ ನಿವೃತ್ತಿ |
| ಪ್ರಪಾದಾನ (ಅರವಟ್ಟಿಗೆ) | ವಿಷ್ಣುಲೋಕ ಪ್ರಾಪ್ತಿ |
| ಹಾಸಿಗೆ | ಸರ್ವಭೋಗ ಪ್ರಾಪ್ತಿ |
| ಚಾಪೆ | ಸಂಸಾರದಿಂದ ಮುಕ್ತಿ |
| ಕಂಬಳಿ | ಅಪಮೃತ್ಯು ಪರಿಹಾರ |
| ವಸ್ತ್ರ | ಪೂರ್ಣಾಯುಷ್ಯ |
| ಕುಸುಮ–ಕುಂಕುಮ | ರಾಜ್ಯಪದವಿ |
| ತಾಂಬೂಲ | ಸಾರ್ವಭೌಮ ಪದವಿ |
| ನಾರಿಕೇಲ (ತೆಂಗಿನಕಾಯಿ) | ಸಪ್ತಜನ್ಮ ವಿಪತ್ತು ನಾಶ |
| ಮಜ್ಜಿಗೆ | ವಿದ್ಯಾದಾನ ಪ್ರಾಪ್ತಿ |
| ಮೊಸರು | ಅಖಂಡ ಫಲ |
| ಕೋಸಂಬರಿ | ಶ್ವೇತದ್ವೀಪ ವಾಸ |
| ಪಾನಕ | ಪಿತೃಗಳ ತೃಪ್ತಿ |
| ಕುಂಭದಾನ (ನೀರಿನ ಕೊಡ) | ಗಯಾಶತಶ್ರಾದ್ಧ ಫಲ |
| ಪಾದರಕ್ಷೆ | ನರಕಪ್ರವೇಶವಿಲ್ಲ |
| ಛತ್ರಿ | ತಾಪತ್ರಯ ನಾಶ |
| ಬೀಸಣಿಗೆ | ರಾಜಸೂಯ ಯಾಗದ ಫಲ |
| ಕೃಷ್ಣಾಜಿನ | ಸಪ್ತದ್ವೀಪ ದಾನ ಫಲ |
| ಮೊಸರನ್ನದ ಬುತ್ತಿ | ಸ್ವರ್ಗ ಪ್ರಾಪ್ತಿ |
ವಿದೇಶಿ ನೆಲದಲ್ಲಿ ಶ್ರಾದ್ಧ ಕರ್ಮ: ಮನುಸ್ಮೃತಿ, ಪರಾಶರ ಸ್ಮೃತಿಯ ಉಲ್ಲೇಖಗಳೇನು?
ಕೊನೆಮಾತು
ವೈಶಾಖ ಮಾಸವು ಕೇವಲ ಆಚರಣೆಯಲ್ಲ, ಅದು ನಮ್ಮ ಅಂತರಂಗವನ್ನು ಶುದ್ಧೀಕರಿಸುವ ಕಾಲ. ಮುಂಜಾನೆಯ ಶಿಸ್ತುಬದ್ಧ ಸ್ನಾನ ಆರೋಗ್ಯಕ್ಕೆ ಹಿತವಾದರೆ, ಪರರಿಗೆ ನೀಡುವ ದಾನವು ಮನಸ್ಸಿಗೆ ಶಾಂತಿ ನೀಡುತ್ತದೆ. ಮಧುಸೂದನನ ಕೃಪೆಗೆ ಪಾತ್ರರಾಗಲು ಈ ವೈಶಾಖ ಮಾಸವು ಅತ್ಯಂತ ಪ್ರಶಸ್ತವಾದುದು.
ಲೇಖನ– ಶ್ರೀನಿವಾಸ ಮಠ









