Sri Gurubhyo Logo

ಫ್ಯಾಕ್ಟ್ ಚೆಕ್: ಮಾಘ ಮಾಸ ಕೇವಲ 15 ದಿನಗಳೇ? ಪಂಚಾಂಗ ಗೊಂದಲಕ್ಕೆ ಇಲ್ಲಿದೆ ಉತ್ತರ

ಉತ್ತರ ಮತ್ತು ದಕ್ಷಿಣ ಭಾರತದ ಪಂಚಾಂಗ ಪದ್ಧತಿಗಳ ವ್ಯತ್ಯಾಸವನ್ನು ತೋರಿಸುವ ಭಾರತದ ನಕ್ಷೆಯ ಇನ್ಫೋಗ್ರಾಫಿಕ್. ಮಾಘ ಮಾಸ ಗೊಂದಲ, ಅಮಾವಾಸ್ಯೆ, ಹುಣ್ಣಿಮೆ, ಕೃಷ್ಣ ಪಕ್ಷ, ಶುಕ್ಲ ಪಕ್ಷದ ಸಂಕೇತಗಳನ್ನು ಒಳಗೊಂಡಿದೆ.
ಉತ್ತರ ಮತ್ತು ದಕ್ಷಿಣ ಭಾರತದ ಪಂಚಾಂಗ ಪದ್ಧತಿಗಳ ವ್ಯತ್ಯಾಸ, ಮಾಘ ಮಾಸದ ಬಗ್ಗೆ ಉಂಟಾಗಿರುವ ಗೊಂದಲವನ್ನು ಈ ಚಿತ್ರ ಸ್ಪಷ್ಟಪಡಿಸುತ್ತದೆ.

ಜನವರಿ 18ನೇ ತಾರೀಕು ‘ಮೌನಿ ಅಮಾವಾಸ್ಯೆ’ (ಮಾಘ ಮಾಸದ ಅಮಾವಾಸ್ಯೆ), ಆ ದಿನ ಬಹಳ ಒಳ್ಳೆಯದು ಎಂಬ ಬಗ್ಗೆ ಲೇಖನ, ವಿಡಿಯೋ ಹರಿದಾಡುತ್ತಿದೆ. ಉತ್ತರ ಭಾರತದಲ್ಲಿ ಈ ದಿನವೇ ಮೌನಿ ಅಮಾವಾಸ್ಯೆ ಆಚರಿಸಲಾಗಿದೆ. ಆದರೆ ಇದು ದಕ್ಷಿಣ ಭಾರತದಲ್ಲಿ ಪುಷ್ಯ ಮಾಸದ ಅಮಾವಾಸ್ಯೆ. ಅಸಲಿಗೆ ದಕ್ಷಿಣ ಭಾರತದಲ್ಲಿ ಮಾಘ ಮಾಸ ಆರಂಭ ಆಗಿದ್ದೇ ಜನವರಿ 19ನೇ ತಾರೀಕಿನಿಂದ. ಉತ್ತರ ಮತ್ತು ದಕ್ಷಿಣ ಭಾರತದ ಪಂಚಾಂಗ ಪದ್ಧತಿಗಳ ನಡುವಿನ ವ್ಯತ್ಯಾಸ ಹಾಗೂ ಈ ವರ್ಷದ ಮಾಘ ಮಾಸದ ಗೊಂದಲದ ಬಗ್ಗೆ ಸ್ಪಷ್ಟವಾದ ವಿಶ್ಲೇಷಣೆ ಇಲ್ಲಿದೆ. ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಚರ್ಚೆಗಳಲ್ಲಿ “ಈ ಬಾರಿ ಮಾಘ ಮಾಸ ಕೇವಲ 15 ದಿನ ಮಾತ್ರ” ಎಂಬ ತಪ್ಪು ಮಾಹಿತಿಯೂ ಹರಿದಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಉತ್ತರ ಭಾರತದ ‘ಪೂರ್ಣಿಮಾಂತ’ ಮತ್ತು ದಕ್ಷಿಣ ಭಾರತದ ‘ಅಮಾಂತ’ ಪದ್ಧತಿಗಳ ಮಧ್ಯದ ವ್ಯತ್ಯಾಸ.

ಏನಿದು ಪದ್ಧತಿಗಳ ವ್ಯತ್ಯಾಸ?

ಭಾರತೀಯ ಪಂಚಾಂಗದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳಲು ಎರಡು ಮುಖ್ಯ ಪದ್ಧತಿಗಳಿವೆ:

  • ಅಮಾಂತ ಪದ್ಧತಿ (ದಕ್ಷಿಣ ಭಾರತ): ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಮಾಸವು ಅಮಾವಾಸ್ಯೆಯ ನಂತರದ ದಿನ (ಶುಕ್ಲ ಪಕ್ಷದ ಪಾಡ್ಯ) ಆರಂಭವಾಗಿ, ಮುಂದಿನ ಅಮಾವಾಸ್ಯೆಗೆಮುಕ್ತಾಯವಾಗುತ್ತದೆ.
  • ಪೂರ್ಣಿಮಾಂತ ಪದ್ಧತಿ (ಉತ್ತರ ಭಾರತ): ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಈ ಪದ್ಧತಿ ಇದೆ. ಇಲ್ಲಿ ಮಾಸವು ಹುಣ್ಣಿಮೆಯ ನಂತರದ ದಿನ (ಕೃಷ್ಣ ಪಕ್ಷದ ಪಾಡ್ಯ) ಆರಂಭವಾಗಿ, ಮುಂದಿನ ಹುಣ್ಣಿಮೆಗೆ ಮುಕ್ತಾಯವಾಗುತ್ತದೆ.

ಶುಕ್ಲ ಪಕ್ಷ ಎಲ್ಲರಿಗೂ ಒಂದೇ!

ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಉತ್ತರ ಭಾರತದವರಿಗಾಗಲಿ ಅಥವಾ ದಕ್ಷಿಣ ಭಾರತದವರಿಗಾಗಲಿ ‘ಶುಕ್ಲ ಪಕ್ಷ’ (ಹುಣ್ಣಿಮೆಯವರೆಗಿನ 15 ದಿನಗಳು) ಒಂದೇ ಸಮಯದಲ್ಲಿ ಬರುತ್ತದೆ. ವ್ಯತ್ಯಾಸವಿರುವುದು ಕೇವಲ ‘ಮಾಸದ ಹೆಸರಿನಲ್ಲಿ’ ಮಾತ್ರ.

ಉದಾಹರಣೆಗೆ:

ದಕ್ಷಿಣ ಭಾರತದವರಿಗೆ ಪುಷ್ಯ ಮಾಸದ ಕೃಷ್ಣ ಪಕ್ಷ ಮುಗಿದು ಅಮಾವಾಸ್ಯೆ ಆದ ತಕ್ಷಣ ‘ಮಾಘ ಮಾಸ’ ಆರಂಭವಾಗುತ್ತದೆ. ಆದರೆ ಉತ್ತರ ಭಾರತದವರಿಗೆ ಪುಷ್ಯ ಮಾಸದ ಹುಣ್ಣಿಮೆ ಮುಗಿದ ತಕ್ಷಣವೇ ‘ಮಾಘ ಮಾಸ’ ಆರಂಭವಾಗಿಬಿಟ್ಟಿರುತ್ತದೆ.

ಮೌನಿ ಅಮಾವಾಸ್ಯೆ ಮತ್ತು ಪ್ರಸ್ತುತ ಗೊಂದಲ

ಉತ್ತರ ಭಾರತದ ಪಂಚಾಂಗದ ಪ್ರಕಾರ, ಮಾಘ ಮಾಸವು ಕೃಷ್ಣ ಪಕ್ಷದಿಂದಲೇ ಆರಂಭವಾಗುವುದರಿಂದ ಅವರಿಗೆ ಮೌನಿ ಅಮಾವಾಸ್ಯೆ (ಮಾಘ ಕೃಷ್ಣ ಅಮಾವಾಸ್ಯೆ) ಈಗಾಗಲೇ (ಜನವರಿ 18, 2026)  ಮುಗಿದಿದೆ.

  • ಉತ್ತರ ಭಾರತದವರಿಗೆ: ಮಾಘ ಮಾಸವು ಪುಷ್ಯ ಹುಣ್ಣಿಮೆಯ ನಂತರವೇ (ಜನವರಿ ಮೊದಲ ವಾರದಲ್ಲಿ) ಆರಂಭವಾಗಿತ್ತು. ಈಗ ಅವರಿಗೆ ಮಾಘ ಮಾಸದ ಕೃಷ್ಣ ಪಕ್ಷ ಮುಗಿದು, ಮಾಘದ ಶುಕ್ಲ ಪಕ್ಷ ನಡೆಯುತ್ತಿದೆ.
  • ದಕ್ಷಿಣ ಭಾರತದವರಿಗೆ: ನಮಗೆ ಈಗಷ್ಟೇ (ಜನವರಿ 18ರ ಪುಷ್ಯ ಮಾಸದ ಅಮಾವಾಸ್ಯೆ ನಂತರ) ಮಾಘ ಮಾಸ ಆರಂಭವಾಗಿದೆ. ನಮಗೆ ಈಗ ನಡೆಯುತ್ತಿರುವುದು ಮಾಘ ಮಾಸದ ಶುಕ್ಲ ಪಕ್ಷ.

ಪಂಚಾಂಗ ಎಂದರೇನು? 60 ಸಂವತ್ಸರಗಳು, ನಕ್ಷತ್ರ, ರಾಶಿಗಳ ಸಂಪೂರ್ಣ ಮಾಹಿತಿ

ಗೊಂದಲ ಎಲ್ಲಿ ಶುರುವಾಯಿತು?

ಉತ್ತರ ಭಾರತದವರು ಮಾಘ ಮಾಸದ ಕೃಷ್ಣ ಪಕ್ಷವನ್ನು (ನಮ್ಮ ಪುಷ್ಯ ಕೃಷ್ಣ ಪಕ್ಷ) ಈಗಾಗಲೇ ಮುಗಿಸಿರುವುದರಿಂದ, ದಕ್ಷಿಣ ಭಾರತದವರು ಈಗಷ್ಟೇ ಮಾಘ ಮಾಸ ಆರಂಭಿಸುತ್ತಿರುವುದನ್ನು ನೋಡಿ “ಅರ್ಧ ತಿಂಗಳು ಕಳೆದುಹೋಯಿತು” ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ಅಸಲಿಗೆ ಪಂಚಾಂಗದ ಲೆಕ್ಕಾಚಾರದಲ್ಲಿ ಯಾವುದೇ ದಿನಗಳು ಕಡಿಮೆಯಾಗಿಲ್ಲ.

ಉತ್ತರ ಹಾಗೂ ದಕ್ಷಿಣ: ಒಂದು ಹೋಲಿಕೆ

ವೈಶಿಷ್ಟ್ಯ ದಕ್ಷಿಣ ಭಾರತ (ಅಮಾಂತ) ಉತ್ತರ ಭಾರತ (ಪೂರ್ಣಿಮಾಂತ)
ತಿಂಗಳ ಆರಂಭ ಅಮಾವಾಸ್ಯೆಯ ನಂತರ (ಶುಕ್ಲ ಪಕ್ಷ) ಹುಣ್ಣಿಮೆಯ ನಂತರ (ಕೃಷ್ಣ ಪಕ್ಷ)
ತಿಂಗಳ ಅಂತ್ಯ ಅಮಾವಾಸ್ಯೆಗೆ ಹುಣ್ಣಿಮೆಗೆ
ಪಕ್ಷಗಳ ಕ್ರಮ ಶುಕ್ಲ ಪಕ್ಷ – ಕೃಷ್ಣ ಪಕ್ಷ ಕೃಷ್ಣ ಪಕ್ಷ – ಶುಕ್ಲ ಪಕ್ಷ
ಹಬ್ಬಗಳ ದಿನಾಂಕ ಶುಕ್ಲ ಪಕ್ಷದ ಹಬ್ಬಗಳು ಇಬ್ಬರಿಗೂ ಒಂದೇ ದಿನ ಕೃಷ್ಣ ಪಕ್ಷದ ಹಬ್ಬಗಳು ಒಂದೇ ದಿನ ಇದ್ದರೂ ಮಾಸದ ಹೆಸರು ಬೇರೆಯಾಗಿರುತ್ತದೆ

2026ನೇ ಇಸವಿಯಯಲ್ಲಿ ಪಂಚಾಂಗದ ಪ್ರಕಾರ ಉತ್ತರ ಭಾರತ (ಪೂರ್ಣಿಮಾಂತ) ಮತ್ತು ದಕ್ಷಿಣ ಭಾರತದ (ಅಮಾಂತ) ಮಾಸಗಳು ಯಾವಾಗ ಆರಂಭವಾಗುತ್ತವೆ ಎಂಬ ಸ್ಪಷ್ಟವಾದ ಪಟ್ಟಿ ಇಲ್ಲಿದೆ. ಈ ಟೇಬಲ್ ಗಮನಿಸಿದರೆ ನಿಮಗೆ ತಿಳಿಯುವುದು ಏನೆಂದರೆ, ಉತ್ತರ ಭಾರತದಲ್ಲಿ ಒಂದು ಮಾಸವು ದಕ್ಷಿಣ ಭಾರತಕ್ಕಿಂತ 15 ದಿನ ಮೊದಲೇ ಆರಂಭವಾಗಿಬಿಡುತ್ತದೆ.

2026ನೇ ಇಸವಿಯಲ್ಲಿ ಮಾಸಗಳ ಪಟ್ಟಿ (ಉತ್ತರ vs ದಕ್ಷಿಣ)

ಮಾಸದ ಹೆಸರು ಉತ್ತರ ಭಾರತ (ಪೂರ್ಣಿಮಾಂತ) ಆರಂಭ ದಕ್ಷಿಣ ಭಾರತ (ಅಮಾಂತ) ಆರಂಭ ವ್ಯತ್ಯಾಸದ ವಿವರಣೆ
ಮಾಘ ಜನವರಿ 4, 2026 ಜನವರಿ 19, 2026 ಉತ್ತರದಲ್ಲಿ ಕೃಷ್ಣ ಪಕ್ಷದಿಂದ ಆರಂಭ
ಫಾಲ್ಗುಣ ಫೆಬ್ರವರಿ 2, 2026 ಫೆಬ್ರವರಿ 18, 2026 ಹುಣ್ಣಿಮೆ ನಂತರ ಉತ್ತರದಲ್ಲಿ ಮಾಸ ಬದಲಾವಣೆ
ಚೈತ್ರ (ಯುಗಾದಿ) ಮಾರ್ಚ್ 4, 2026 ಮಾರ್ಚ್ 19, 2026 ದಕ್ಷಿಣದಲ್ಲಿ ಯುಗಾದಿಯೊಂದಿಗೆ ಹೊಸ ವರ್ಷ
ವೈಶಾಖ ಏಪ್ರಿಲ್ 3, 2026 ಏಪ್ರಿಲ್ 18, 2026
ಜ್ಯೇಷ್ಠ (ನಿಜ) ಮೇ 2, 2026 ಮೇ 17, 2026 ಈ ಬಾರಿ ಅಧಿಕ ಮಾಸದ ಪ್ರಭಾವ ಇರುತ್ತದೆ
ಆಷಾಢ ಜೂನ್ 30, 2026 ಜುಲೈ 15, 2026
ಶ್ರಾವಣ ಜುಲೈ 30, 2026 ಆಗಸ್ಟ್ 13, 2026
ಭಾದ್ರಪದ ಆಗಸ್ಟ್ 29, 2026 ಸೆಪ್ಟೆಂಬರ್ 12, 2026
ಆಶ್ವಯುಜ ಸೆಪ್ಟೆಂಬರ್ 27, 2026 ಅಕ್ಟೋಬರ್ 11, 2026 ದಸರಾ ಎರಡೂ ಕಡೆ ಒಂದೇ ಸಮಯದಲ್ಲಿ
ಕಾರ್ತಿಕ ಅಕ್ಟೋಬರ್ 27, 2026 ನವೆಂಬರ್ 9, 2026 ದೀಪಾವಳಿ ನಂತರ ದಕ್ಷಿಣದಲ್ಲಿ ಆರಂಭ
ಮಾರ್ಗಶಿರ ನವೆಂಬರ್ 25, 2026 ಡಿಸೆಂಬರ್ 9, 2026
ಪುಷ್ಯ ಡಿಸೆಂಬರ್ 24, 2026 ಜನವರಿ 8, 2027

ವಿಶ್ಲೇಷಣೆ: ಯಾಕೆ ಈ ಗೊಂದಲ?

  1. ಶುಕ್ಲ ಪಕ್ಷ : ಹುಣ್ಣಿಮೆಯವರೆಗಿನ ಈ 15 ದಿನಗಳು ಉತ್ತರ ಮತ್ತು ದಕ್ಷಿಣ ಭಾರತದವರಿಬ್ಬರಿಗೂ ಒಂದೇ ಮಾಸದ ಹೆಸರಿನಲ್ಲಿ ಇರುತ್ತವೆ. ಹಾಗಾಗಿ ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ದೀಪಾವಳಿಯಂತಹ ಹಬ್ಬಗಳು ಒಂದೇ ದಿನ ಬರುತ್ತವೆ.

  2. ಕೃಷ್ಣ ಪಕ್ಷ : ಅಮಾವಾಸ್ಯೆಯವರೆಗಿನ ಈ 15 ದಿನಗಳಲ್ಲಿ ಮಾಸದ ಹೆಸರು ಬದಲಾಗುತ್ತದೆ.

    • ಉತ್ತರ ಭಾರತದವರಿಗೆ ಇದು ಹೊಸ ಮಾಸದ ಮೊದಲ 15 ದಿನಗಳು.

    • ದಕ್ಷಿಣ ಭಾರತದವರಿಗೆ ಇದು ಹಳೆಯ ಮಾಸದ ಕೊನೆಯ 15 ದಿನಗಳು.

  3. ಮೌನಿ ಅಮಾವಾಸ್ಯೆ ಉದಾಹರಣೆ: 2026ರಲ್ಲಿ ಜನವರಿ 18ಕ್ಕೆ ಅಮಾವಾಸ್ಯೆ ಬರುತ್ತದೆ. ಉತ್ತರ ಭಾರತದವರಿಗೆ ಇದು ‘ಮಾಘ ಮಾಸ’ದ ಹದಿನೈದನೆಯ ದಿನ (ಅವರ ಲೆಕ್ಕದಲ್ಲಿ ಮಾಘ ಕೃಷ್ಣ ಅಮಾವಾಸ್ಯೆ). ದಕ್ಷಿಣ ಭಾರತದವರಿಗೆ ಇದು ‘ಪುಷ್ಯ ಮಾಸ’ದ ಕೊನೆಯ ದಿನ.

ಕೊನೆಮಾತು

“ಮಾಘ ಮಾಸ ಈ ಬಾರಿ ಕೇವಲ 15 ದಿನ” ಎಂಬುದು ಸಂಪೂರ್ಣ ತಪ್ಪು. ದಕ್ಷಿಣ ಭಾರತದ ಪದ್ಧತಿಯಂತೆ ಮಾಘ ಮಾಸವು ಪೂರ್ಣ 30 ದಿನಗಳ ಕಾಲ (ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಸೇರಿದಂತೆ) ಇರುತ್ತದೆ. ಉತ್ತರ ಭಾರತದಲ್ಲಿ ಮಾಸದ ಮೊದಲ 15 ದಿನಗಳು (ಕೃಷ್ಣ ಪಕ್ಷ) ಈಗಾಗಲೇ ಮುಗಿದಿದೆ, ಅಲ್ಲಿ ಈಗ ಮಾಘ ಮಾಸದ ಶುಕ್ಲ ಪಕ್ಷ. ಆದ್ದರಿಂದ ಉಂಟಾದ ಗೊಂದಲವಿದು ಅಷ್ಟೇ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts