2026ರ ಮಾರ್ಚ್ 19ರಿಂದ ಆರಂಭವಾಗಲಿರುವ ‘ಪರಾಭವ ನಾಮ ಸಂವತ್ಸರ’ವು ಕನ್ಯಾ ರಾಶಿಯವರಿಗೆ ಮಿಶ್ರಫಲವನ್ನು ನೀಡಲಿದೆ. ಈ ವರ್ಷ ಶನಿ ಗ್ರಹವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಸಂಚರಿಸುತ್ತಿರುವುದು ಜೀವನದ ಮೇಲೆ ಯಾವ ರೀತಿಯ ಬದಲಾವಣೆ ತರಲಿದೆ? ಸಪ್ತಮ ಶನಿಯ ಸವಾಲುಗಳ ನಡುವೆ ಗುರುವಿನ ಬಲವು ನಿಮಗೆ ಹೇಗೆ ವರದಾನವಾಗಲಿದೆ? ವೃತ್ತಿ, ಕುಟುಂಬ ಮತ್ತು ಆರೋಗ್ಯದ ದೃಷ್ಟಿಯಿಂದ ನೀವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕನ್ಯಾ ರಾಶಿಯವರ ಗುಣ ಸ್ವಭಾವ
ಕನ್ಯಾ ರಾಶಿಯವರು ಉತ್ತರಾ ಫಲ್ಗುಣಿ (2, 3, 4ನೇ ಪಾದ), ಹಸ್ತ ಮತ್ತು ಚಿತ್ತಾ ನಕ್ಷತ್ರದ ಮೊದಲ ಎರಡು ಪಾದಗಳಲ್ಲಿ ಜನಿಸಿದವರು. ಬುಧ ರಾಶ್ಯಾಧಿಪತಿ. ಇವರು ಸಹಜವಾಗಿಯೇ ಬುದ್ಧಿವಂತರು, ವಿವೇಚನಾಶೀಲರು ಮತ್ತು ವ್ಯವಹಾರ ಕುಶಲರು. ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಇಷ್ಟಪಡುತ್ತಾರೆ. ಟೀಕೆ ಮಾಡುವುದರಲ್ಲಿ ಮತ್ತು ವಿಶ್ಲೇಷಣೆ ಮಾಡುವುದರಲ್ಲಿ ಸಿದ್ಧಹಸ್ತರು. ಸಹಾಯ ಮಾಡುವ ಗುಣವಿದ್ದರೂ ಯಾರನ್ನೂ ಅಷ್ಟು ಬೇಗ ನಂಬುವುದಿಲ್ಲ. ಸಮಾಜದಲ್ಲಿ ತಮ್ಮದೇ ಆದ ಗೌರವವನ್ನು ಕಾಪಾಡಿಕೊಳ್ಳುವವರು, ಸವಾಲುಗಳನ್ನು ಜಾಣ್ಮೆಯಿಂದ ಎದುರಿಸುತ್ತಾರೆ.
ಶನಿ ಸಂಚಾರ
ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮ ರಾಶಿಯಿಂದ ಏಳನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ಇದನ್ನು ಜ್ಯೋತಿಷ್ಯದಲ್ಲಿ ‘ಸಪ್ತಮ ಶನಿ’ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ದಾಂಪತ್ಯ ಜೀವನ ಮತ್ತು ಪಾಲುದಾರಿಕೆ (Partnership) ವ್ಯವಹಾರದ ಮೇಲೆ ಪ್ರಭಾವ ಬೀರುತ್ತದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ತಾಳ್ಮೆ ಇರುವುದು ಬಹಳ ಮುಖ್ಯ. ಅವಿವಾಹಿತರಿಗೆ ವಿವಾಹ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ವ್ಯವಹಾರದಲ್ಲಿ ಹೊಸಬರನ್ನು ನಂಬುವ ಮೊದಲು ಎಚ್ಚರವಿರಲಿ. ಆದರೆ ಶನಿಯು ಹಠಾತ್ ಲಾಭ ಅಥವಾ ದೀರ್ಘಕಾಲದ ಹೂಡಿಕೆಯಿಂದ ಲಾಭ ತರುವ ಸಾಧ್ಯತೆಯೂ ಇದೆ.
ಗುರು ಸಂಚಾರ
ಕನ್ಯಾ ರಾಶಿಯವರಿಗೆ ಈ ವರ್ಷ ಗುರುವು ದೊಡ್ಡ ಮಟ್ಟದ ರಕ್ಷಣೆಯನ್ನು ನೀಡಲಿದ್ದಾನೆ.
- ಜೂನ್ 1ರ ತನಕ: ಗುರುವು 10ನೇ ಮನೆಯಲ್ಲಿದ್ದು ವೃತ್ತಿ ಬದುಕಿನಲ್ಲಿ ಬದಲಾವಣೆ ಅಥವಾ ಕೆಲಸದ ಒತ್ತಡ ನೀಡಬಹುದು.
- ಜೂನ್ 2ರಿಂದ ಅಕ್ಟೋಬರ್ 31ರ ತನಕ: ಗುರುವು 11ನೇ ಮನೆಗೆ (ಕರ್ಕಾಟಕ) ಪ್ರವೇಶಿಸುತ್ತಾನೆ. ಇದು ಕನ್ಯಾ ರಾಶಿಯವರಿಗೆ ‘ಸುವರ್ಣ ಕಾಲ’. ಆರ್ಥಿಕವಾಗಿ ಲಾಭ, ಬಾಕಿ ಉಳಿದಿದ್ದ ಹಣ ವಾಪಸ್ ಬರುವುದು ಮತ್ತು ಸಂತಾನ ಭಾಗ್ಯದಂತಹ ಶುಭ ಫಲಗಳು ಸಿಗಲಿವೆ.
- ನವೆಂಬರ್ 1ರಿಂದ ಜನವರಿ 24ರ ತನಕ: ಗುರು 12ನೇ ಮನೆಗೆ ಹೋಗುವುದರಿಂದ ಧಾರ್ಮಿಕ ಕಾರ್ಯಗಳಿಗೆ ಖರ್ಚುಗಳು ಹೆಚ್ಚಾಗಲಿವೆ.
- ಜನವರಿ 25ರ ನಂತರ: ಪುನಃ 11ನೇ ಮನೆಗೆ ಬರುವುದರಿಂದ ಲಾಭದ ಹಾದಿ ಸುಗಮವಾಗಲಿದೆ.
ರಾಹು-ಕೇತು ಸಂಚಾರ
ಡಿಸೆಂಬರ್ 5ರ ತನಕ ರಾಹುವು 6ನೇ ಮನೆಯಲ್ಲಿ (ಕುಂಭ) ಮತ್ತು ಕೇತುವು 12ನೇ ಮನೆಯಲ್ಲಿ (ಸಿಂಹ) ಇರುತ್ತಾರೆ. 6ನೇ ಮನೆಯ ರಾಹುವು ನಿಮಗೆ ಅತ್ಯಂತ ಶುಭಪ್ರದ. ಶತ್ರುಗಳ ಮೇಲೆ ವಿಜಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆದರೆ ಡಿಸೆಂಬರ್ 5ರ ನಂತರ ರಾಹು 5ನೇ ಮನೆಗೆ ಮತ್ತು ಕೇತು 11ನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಮಕ್ಕಳ ವಿಷಯದಲ್ಲಿ ಸ್ವಲ್ಪ ಆತಂಕ ಮತ್ತು ಹಿರಿಯ ಒಡಹುಟ್ಟಿದವರೊಂದಿಗೆ ಸಣ್ಣ ಘರ್ಷಣೆಗಳು ಉಂಟಾಗಬಹುದು.
ಪರಿಹಾರಗಳು
- ಬುಧ ಶಾಂತಿ: ಪ್ರತಿ ಬುಧವಾರ ವಿಷ್ಣು ಸಹಸ್ರನಾಮ ಪಠಿಸಿ ಮತ್ತು ಹಸಿರು ಹೆಸರು ಬೇಳೆಯನ್ನು ದಾನ ಮಾಡಿ.
- ದೇವಿಯ ಆರಾಧನೆ: ದುರ್ಗಾ ದೇವಿಯ ದರ್ಶನ ಮತ್ತು ಲಲಿತಾ ಸಹಸ್ರನಾಮ ಪಠಿಸುವುದು ಮಾನಸಿಕ ಶಾಂತಿ ನೀಡುತ್ತದೆ.
- ಶನಿ ಪರಿಹಾರ: ಸಪ್ತಮ ಶನಿಯ ಪ್ರಭಾವ ತಗ್ಗಿಸಲು ಶನಿವಾರ ಹನುಮಂತನಿಗೆ ಸಿಂಧೂರ ಅರ್ಪಿಸಿ ಅಥವಾ ಹನುಮಾನ್ ಚಾಲೀಸಾ ಪಠಿಸಿ.
- ಮಂತ್ರ: ಪ್ರತಿದಿನ ‘ಓಂ ಬುಂ ಬುಧಾಯ ನಮಃ’ ಮಂತ್ರವನ್ನು 108 ಬಾರಿ ಜಪಿಸಿ.
ಕನ್ಯಾ ರಾಶಿ ಫಲ: ಅಚ್ಚುಕಟ್ಟುತನದ ಈ ರಾಶಿಯವರ ವ್ಯಕ್ತಿತ್ವ ಮತ್ತು ಯಶಸ್ಸಿನ ಗುಟ್ಟು ನಿಮಗೆ ಗೊತ್ತೇ?
ಕೊನೆಮಾತು: “ಸಪ್ತಮ ಶನಿಯ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ವಾದ-ವಿವಾದ ಮಾಡುವುದನ್ನು ತಪ್ಪಿಸಿ. ಹೂಡಿಕೆ ಮಾಡುವಾಗ ಆತುರ ಪಡಬೇಡಿ, ಗುರುವಿನ ಬಲ ಇರುವುದರಿಂದ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ.”
ಲೇಖನ– ಶ್ರೀನಿವಾಸ ಮಠ





