Sri Gurubhyo Logo

ಧನುರ್ಮಾಸದ ವಿಶೇಷ ತ್ರಿರಂಗ ದರ್ಶನ: ಪುರಾಣ ಮಹತ್ವ, ಯಾತ್ರಾ ಮಾರ್ಗ ಮತ್ತು ಪುಣ್ಯಫಲಗಳು

Dhanurmasa Special Pligrimage of Triranga
ಪ್ರಾತಿನಿಧಿಕ ಚಿತ್ರ

ಧನುರ್ಮಾಸದಲ್ಲಿ ಪೂಜಾ- ಕೈಂಕರ್ಯಗಳಿಗೆ ವಿಶೇಷ ಮಹತ್ವ. ಅದು ಈಶ್ವರನೇ ಇರಲಿ, ಮಹಾ ವಿಷ್ಣುವೇ ಇರಲಿ ದೇವರ ಆರಾಧನೆಯಿಂದ ಆಧ್ಯಾತ್ಮಿಕ ಹಾಗೂ ಲೌಕಿಕವಾದ ಅಭೀಪ್ಸೆಗಳು ಈಡೇರುತ್ತವೆ ಎಂಬುದು ನಂಬಿಕೆಯಾಗಿದೆ. ಧನುರ್ ಮಾಸ ಅಂದರೆ, ರವಿ ಗ್ರಹವು ಧನುಸ್ಸು ರಾಶಿಯಲ್ಲಿ ಸಂಚರಿಸುವಂಥ ಅವಧಿ. ಈ ಮಾಸದಲ್ಲಿ ಕಾವೇರಿ ನದಿ ತೀರದಲ್ಲಿ ನೆಲೆಸಿರುವ ಆದಿರಂಗ (ಶ್ರೀರಂಗಪಟ್ಟಣದಲ್ಲಿ ಇರುವ ಶ್ರೀರಂಗನಾಥ), ಮಧ್ಯರಂಗ (ಶಿವನಸಮುದ್ರದಲ್ಲಿ ಇರುವಂಥ ರಂಗನಾಥನ ಕ್ಷೇತ್ರ) ಈ ಎರಡೂ ಕರ್ನಾಟಕದಲ್ಲಿಯೇ ಇದೆ. ಮತ್ತು ಅಂತ್ಯರಂಗ (ತಮಿಳುನಾಡಿನ ತಿರುಚ್ಚಿಯಲ್ಲಿ ಇರುವ ರಂಗನಾಥನ ಕ್ಷೇತ್ರ) ಎಂಬ ಮೂರೂ ಕ್ಷೇತ್ರಗಳ ದರ್ಶನ ಮಾಡುವುದನ್ನು ‘ತ್ರಿರಂಗ ದರ್ಶನ’ ಎಂದು ಕರೆಯಲಾಗುತ್ತದೆ. ಒಂದೇ ದಿನದಲ್ಲಿ ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಾಗಿ ಈ ಮೂರು ರಂಗನಾಥ ಸ್ವಾಮಿ ದೇವಾಲಯ ದರ್ಶನ ಮಾಡಬೇಕು ಎಂಬುದು ನಂಬಿಕೆ. ಇದು ಕೇವಲ ತೀರ್ಥಯಾತ್ರೆ ಮಾತ್ರವಲ್ಲ, ಮುಕ್ತಿಯ ಮಾರ್ಗದಲ್ಲಿ ಸಾಗುವುದಕ್ಕೆ ಒಂದು ಆಧ್ಯಾತ್ಮಿಕ ಸಾಧನೆ ಎಂದು ಪುರಾಣಗಳಲ್ಲಿ ಉಲ್ಲೇಖ ಇದೆ. 

ತ್ರಿರಂಗ ದರ್ಶನದ ಪೌರಾಣಿಕ ಹಿನ್ನೆಲೆ:

ಪದ್ಮಪುರಾಣ, ಬ್ರಹ್ಮಾಂಡಪುರಾಣ ಮತ್ತು ವೈಷ್ಣವ ಆಗಮಗಳಲ್ಲಿ ಕಾವೇರಿ ತೀರದ ಈ ಮೂರು ರಂಗಕ್ಷೇತ್ರಗಳ ವಿಶೇಷ ಮಹಿಮೆ ವಿವರಿಸಲಾಗಿದೆ. ಶಾಸ್ತ್ರಗಳಲ್ಲಿ ಹೇಳುವಂತೆ, “ತ್ರಯಾಣಾಂ ರಂಗನಾಥಾನಾಂ ದರ್ಶನಂ ಪಾಪನಾಶನಂ”. ಅಂದರೆ, ಆದಿರಂಗ–ಮಧ್ಯರಂಗ–ಅಂತ್ಯರಂಗ ಈ ಮೂರು ರಂಗನಾಥರ ದರ್ಶನ ಮಾಡಿದರೆ ಮಹಾಪಾಪಗಳೂ ನಾಶವಾಗುತ್ತವೆ. ಪುರಾಣದ ಪ್ರಕಾರ, ಆದಿರಂಗ – ಸೃಷ್ಟಿಯ ಸಂಕೇತ, ಮಧ್ಯರಂಗ – ಸ್ಥಿತಿಯ ಸಂಕೇತ, ಅಂತ್ಯರಂಗ – ಲಯ ಅಥವಾ ಮೋಕ್ಷದ ಸಂಕೇತ. ಈ ಮೂರು ಹಂತಗಳನ್ನು ದರ್ಶನ ಮಾಡುವುದೇ ಜೀವನಯಾತ್ರೆಯ ಪರಿಪೂರ್ಣತೆ ಎಂದು ನಂಬಲಾಗಿದೆ.

ತ್ರಿರಂಗ ದರ್ಶನ ಮಾರ್ಗಸೂಚಿ

ತ್ರಿರಂಗ ಯಾತ್ರೆಯ ಸಾಂಪ್ರದಾಯಿಕ ಮಾರ್ಗ ಮತ್ತು ಅಂತರ:

ತ್ರಿರಂಗ ದರ್ಶನವನ್ನು ಸಾಮಾನ್ಯವಾಗಿ ಕಾವೇರಿ ನದಿಯ ಹರಿವಿನ ದಿಕ್ಕಿನಲ್ಲಿ, ಅಂದರೆ ಮೇಲಿನಿಂದ ಕೆಳಗೆ ಮಾಡುವುದೇ ಸಂಪ್ರದಾಯ.

ಆದಿರಂಗ – ಶ್ರೀರಂಗಪಟ್ಟಣ (ಮಂಡ್ಯ)

ಬೆಂಗಳೂರಿನಿಂದ ಸುಮಾರು 125 ಕಿ.ಮೀ

ಕಾವೇರಿ ತೀರದಲ್ಲಿರುವ ಮೊದಲ ರಂಗಕ್ಷೇತ್ರ

ಮಧ್ಯರಂಗ – ಶಿವನಸಮುದ್ರ (ಚಾಮರಾಜನಗರ)

ಶ್ರೀರಂಗಪಟ್ಟಣದಿಂದ ಸುಮಾರು 80 ಕಿ.ಮೀ

ಅಪರೂಪದ ಮತ್ತು ಶಾಂತ ವಾತಾವರಣದ ಕ್ಷೇತ್ರ

ಅಂತ್ಯರಂಗ – ಶ್ರೀರಂಗಂ (ತಮಿಳುನಾಡು)

ಶಿವನಸಮುದ್ರದಿಂದ ಸುಮಾರು 260ರಿಂದ 300 ಕಿ.ಮೀ

108 ದಿವ್ಯದೇಶಗಳಲ್ಲಿ ಪ್ರಮುಖ ಸ್ಥಾನ ಪಡೆದ ಕ್ಷೇತ್ರ

2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ

ಧನುರ್ಮಾಸದಲ್ಲಿ ತ್ರಿರಂಗ ದರ್ಶನದ ವಿಶೇಷ ಫಲಗಳು:

ಧನುರ್ಮಾಸದಲ್ಲಿ ತ್ರಿರಂಗ ದರ್ಶನ ಮಾಡಿದರೆ ಅದರಿಂದ ದೊರೆಯುವ ಧಾರ್ಮಿಕ ಫಲ ದ್ವಿಗುಣ ಆಗುತ್ತದೆ ಎಂಬುದು ನಂಬಿಕೆ. 

ಪಾಪ ವಿಮೋಚನೆ: ಅಜ್ಞಾನದಿಂದ ಅಥವಾ ತಿಳಿದು ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

ಮೋಕ್ಷ ಪ್ರಾಪ್ತಿ: ಜನನ–ಮರಣ ಚಕ್ರದಿಂದ ಮುಕ್ತಿ ಪಡೆದು ವೈಕುಂಠ ಪ್ರಾಪ್ತಿಗೆ ದಾರಿ ತೆರೆದುಕೊಳ್ಳುತ್ತದೆ.

ಮಾನಸಿಕ ಶಾಂತಿ ಮತ್ತು ಆರೋಗ್ಯ: ಕಾವೇರಿ ತೀರದ ಪ್ರಶಾಂತ ವಾತಾವರಣ, ರಂಗನಾಥನ ಶಯನಮುದ್ರೆ ದರ್ಶನವು ಮನಸ್ಸಿಗೆ ಶಾಂತಿ ನೀಡುತ್ತದೆ.

ಕುಟುಂಬ ಸುಖ ಮತ್ತು ಐಶ್ವರ್ಯ: ಲಕ್ಷ್ಮೀವಲ್ಲಭನಾದ ಶ್ರೀರಂಗನಾಥನ ಆರಾಧನೆಯಿಂದ ಆರ್ಥಿಕ ಸ್ಥಿರತೆ, ಸಂತಾನ ಭಾಗ್ಯ ಮತ್ತು ಸಮೃದ್ಧಿ ಲಭಿಸುತ್ತದೆ.

ತ್ರಿರಂಗ ದರ್ಶನಕ್ಕೆ ಪಾಲಿಸಬೇಕಾದ ನಿಯಮಗಳು:

ಪೂರ್ಣ ಫಲಪ್ರಾಪ್ತಿಗಾಗಿ ಈ ನಿಯಮಗಳನ್ನು ಪಾಲಿಸುವುದು ಅಗತ್ಯ. ಬ್ರಾಹ್ಮಿ ಮುಹೂರ್ತ ದರ್ಶನ – ಬೆಳಿಗ್ಗೆ 4 ರಿಂದ 6 ಗಂಟೆಯೊಳಗೆ ಧನುರ್ಮಾಸ ಪೂಜೆ ಶ್ರೇಷ್ಠ. ಸಂಕಲ್ಪ– ಯಾತ್ರೆ ಆರಂಭಿಸುವ ಮೊದಲು ತ್ರಿರಂಗ ದರ್ಶನ ಸಂಕಲ್ಪ ಮಾಡಬೇಕು. ಸಾಂಪ್ರದಾಯಿಕ ವಸ್ತ್ರಧಾರಣೆ- ಪುರುಷರು ಪಂಚೆ–ಶಲ್ಯ, ಮಹಿಳೆಯರು ಸೀರೆ ಅಥವಾ ಸರಳ ಭಾರತೀಯ ಉಡುಗೆ.

ಮಂತ್ರ ಜಪ – “ಓಂ ನಮೋ ನಾರಾಯಣಾಯ” ಅಥವಾ ವಿಷ್ಣು ಸಹಸ್ರನಾಮ ಪಠಣ. ದಾನಧರ್ಮ– ಅನ್ನದಾನ ಅಥವಾ ವಸ್ತ್ರದಾನ ಮಾಡಿದರೆ ಯಾತ್ರೆಯ ಪುಣ್ಯ ಮತ್ತೂ ಹೆಚ್ಚಾಗುತ್ತದೆ.

ರಾಜ ಶ್ಯಾಮಲಾ ದೇವಿ: ಜ್ಞಾನ, ವಾಕ್ ಸಿದ್ಧಿ, ಕಲೆ ಮತ್ತು ರಾಜಕೀಯ ಯಶಸ್ಸಿನ ಶಕ್ತಿದೇವತೆ

ಯಾತ್ರಾರ್ಥಿಗಳಿಗೆ ಉಪಯುಕ್ತ ಸೂಚನೆಗಳು:

ಒಂದೇ ದಿನದಲ್ಲಿ ದರ್ಶನ ಮಾಡುವವರು ಮುಂಜಾನೆ ಆದಿರಂಗದಿಂದ ಪ್ರಾರಂಭಿಸುವುದು ಸೂಕ್ತ. ಸಾತ್ವಿಕ ಆಹಾರ ಸೇವನೆಗೆ ಆದ್ಯತೆ ನೀಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಬೇಕು. ಧಾರ್ಮಿಕವಾಗಿ ಫಲ ದೊರೆಯಬೇಕು ಎಂಬ ಕಾರಣಕ್ಕೆ ವೇಗದ ಚಾಲನೆ ಒಳ್ಳೆಯದಲ್ಲ. 

ಕಾವೇರಿ ತಾಯಿಯ ಮಡಿಲಲ್ಲಿ ನೆಲೆಸಿರುವ ಈ ಮೂರು ರಂಗನಾಥರು ಮನುಷ್ಯರ ಜೀವನದ ಸೃಷ್ಟಿ–ಸ್ಥಿತಿ–ಲಯದ ಸಂಕೇತ. ಧನುರ್ಮಾಸದ ಪವಿತ್ರ ಕಾಲದಲ್ಲಿ ತ್ರಿರಂಗ ದರ್ಶನ ಮಾಡುವುದರಿಂದ ದೈವಿಕ ಅನುಗ್ರಹ ಮತ್ತು ಮಾನಸಿಕಶಾಂತಿ ಲಭಿಸುತ್ತದೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts