ಅಯೋಧ್ಯೆಯ ರಾಜನಾಗಿದ್ದ, ಶ್ರೀರಾಮನ ತಂದೆ ದಶರಥ ಮಹಾರಾಜನಿಂದ ರಚಿತವಾದ ಈ ‘ಶನಿ ಸ್ತೋತ್ರ’ವು ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಭಕ್ತಿಯ ಮಾರ್ಗದಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ನಂಬಲಾಗಿದೆ. ಶನಿ ದೇವನ ಅವಕೃಪೆಯಿಂದ ಅಥವಾ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದಲು ಈ ಸ್ತೋತ್ರವು ರಾಮಬಾಣ ಇದ್ದಂತೆ.
ಹಿನ್ನೆಲೆ ಮತ್ತು ಸಂದರ್ಭ
ಒಮ್ಮೆ ದಶರಥ ಮಹಾರಾಜನು ಆಳುತ್ತಿದ್ದ ಕಾಲದಲ್ಲಿ, ಶನಿ ದೇವನು ‘ರೋಹಿಣಿ’ ನಕ್ಷತ್ರವನ್ನು ಭೇದಿಸಿ ಸಂಚರಿಸುವ (ರೋಹಿಣಿ ಶಕಟ ಭೇದ) ಯೋಗವಿತ್ತು. ಜ್ಯೋತಿಷ್ಯದ ಪ್ರಕಾರ ಈ ಘಟನೆ ಸಂಭವಿಸಿದರೆ ಭೂಮಿಯ ಮೇಲೆ 12 ವರ್ಷಗಳ ಕಾಲ ಭೀಕರ ಕ್ಷಾಮ ಮತ್ತು ದುರ್ಭಿಕ್ಷೆ ಉಂಟಾಗುತ್ತದೆ. ತನ್ನ ಪ್ರಜೆಗಳನ್ನು ಈ ವಿಪತ್ತಿನಿಂದ ರಕ್ಷಿಸಲು ದಶರಥನು ತನ್ನ ದಿವ್ಯ ರಥವನ್ನೇರಿ ಶನಿ ಲೋಕಕ್ಕೆ ಧಾವಿಸುತ್ತಾನೆ. ದಶರಥನ ಧೈರ್ಯ ಮತ್ತು ಪ್ರಜಾ ವಾತ್ಸಲ್ಯವನ್ನು ಕಂಡ ಶನಿ ದೇವನು ಪ್ರಸನ್ನನಾಗುತ್ತಾನೆ. ಆಗ ದಶರಥನು ಶನಿ ದೇವನನ್ನು ಭಕ್ತಿಯಿಂದ ಸ್ತುತಿಸುತ್ತಾನೆ. ಅದೇ ಈ ದಶರಥ ಕೃತ ಶನಿ ಸ್ತೋತ್ರ.
ಶ್ರೀ ಶನೈಶ್ಚರ ಸ್ತೋತ್ರಂ (ಸಂಪೂರ್ಣ ಪಾಠ)
ಧ್ಯಾನಮ್
ನಮಃ ಕೃಷ್ಣಾಯ ನೀಲಾಯ ಶಿತಿಕಂಠನಿಭಾಯ ಚ | ನಮಃ ಕಾಲಾಗ್ನಿರೂಪಾಯ ಕೃತಾಂತಾಯ ಚ ವೈ ನಮಃ || 1 ||
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಶ್ರುಜಟಾಯ ಚ | ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ || 2 ||
ನಮಃ ಪುಷ್ಕಲಗಾತ್ರಾಯ ಸ್ಥೂಲರೋಮ್ಣೇ ಚ ವೈ ನಮಃ | ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಽಸ್ತು ತೇ || 3 ||
ನಮಸ್ತೇ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ | ನಮೋ ಘೋರಾಯ ರೌದ್ರಾಯ ಭೀಷಣಾಯ ಕಪಾಲಿನೇ || 4 ||
ನಮಸ್ತೇ ಸರ್ವಭಕ್ಷಾಯ ಬಲೀಮುಖ ನಮೋಽಸ್ತು ತೇ | ಸೂರ್ಯಪುತ್ರ ನಮಸ್ತೇಽಸ್ತು ಭಾಸ್ಕರೇ ಭಯದಾಯಕ || 5 ||
ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಽಸ್ತು ತೇ | ನಮೋ ಮಂದಗತೇ ತುಭ್ಯಂ ನಿಸ್ತ್ರಿಂಶಾಯ ನಮೋಽಸ್ತು ತೇ || 6 ||
ತಪಸಾ ದಗ್ಧದೇಹಾಯ ನಿತ್ಯಂ ಯೋಗರತಾಯ ಚ | ನಮೋ ನಿತ್ಯಂ ಕ್ಷುಧಾರ್ತಾಯ ಅತೃಪ್ತಾಯ ಚ ವೈ ನಮಃ || 7 ||
ಜ್ಞಾನನೇತ್ರ ನಮಸ್ತೇಽಸ್ತು ಕಶ್ಯಪಾತ್ಮಜಸೂನವೇ | ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್ಕ್ಷಣಾತ್ || 8 ||
ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ | ತ್ವಯಾ ವಿಲೋಕಿತಾಃ ಸರ್ವೇ ನಾಶಂ ಯಾಂತಿ ಸಮೂಲತಃ || 9 ||
ಪ್ರಸಾದಂ ಕುರು ಮೇ ಸೌರೇ ವರಾರ್ಥೇ ಪ್ರಣತೋಽಸ್ಮ್ಯಹಂ | ಏವಂ ಸ್ತುತಸ್ತದಾ ಸೌರಿರ್ವಿಶ್ವಪಾಲೋ ಮಹಾಬಲಃ || 10 ||
ಅಬ್ರವೀಚ್ಚ ಶನಿಃ ಪ್ರೀತೋ ವರಂ ವೃಣು ದಶರಥ | ದಶರಥ ಉವಾಚ – ಪ್ರಸನ್ನೋ ಯದಿ ಮೇ ಸೌರೇ ವರಂ ದೇಹಿ ಮಮೇಪ್ಸಿತಮ್ || 11 ||
ರೋಹಿಣೀಂ ಭೇದಯಿತ್ವಾ ತು ನ ಗಂತವ್ಯಂ ತ್ವಯಾ ಪ್ರಭೋ | ಶನಿರುವಾಚ – ಏವಮಸ್ತು ಮಹಾರಾಜ ವರಂ ದತ್ತಂ ಮಯಾ ತವ || 12 ||
ಅನ್ಯಂ ಚ ವರಮರ್ಥಯ ತ್ವಂ ದದ್ಯಾಂ ಯತ್ತೇ ಮನಸಿ ಸ್ಥಿತಮ್ | ದಶರಥ ಉವಾಚ – ನ ಪೀಡ್ಯಂತೇ ಮನುಷ್ಯಾಶ್ಚ ತುಷ್ಟೇನ ತವ ಭಕ್ತಿತಃ || 13 ||
ದೇವ-ಅಸುರ-ಮನುಷ್ಯಾಶ್ಚ ಪಶು-ಪಕ್ಷಿ-ಸರೀಸೃಪಾಃ | ಯ ಏವಂ ಪಠೇತ್ ಸ್ತೋತ್ರಂ ಭಕ್ತಿಮಾನ್ ಸಮಹಿತಃ || 14 ||
ಸ ಸರ್ವದುಃಖ ನಿರ್ಮುಕ್ತಃ ಸುಖೀ ಭವತು ಸರ್ವದಾ | ಶನಿರುವಾಚ – ಯಃ ಪಠೇತ್ ಸ್ತೋತ್ರಮೇತತ್ತು ಪ್ರಾತರುತ್ಥಾಯ ಮಾನವಃ || 15 ||
ನ ತಸ್ಯ ಪೀಡಾ ಭವತಿ ಸಾಡೇಸಾತಿ ಸಮುದ್ಭವಾ | ನಕ್ಷತ್ರಪೀಡಾ ಯೋಗಸ್ಥಾ ಪೀಡಾ ಚಾನ್ಯಾ ನ ವಿದ್ಯತೇ || 16 ||
ದದ್ಯಾತ್ ಶ್ರದ್ಧಾ ಸಮನ್ವಿತಃ ಶಮ್ಯರ್ಕಪತ್ರ ಪುಷ್ಪಾಣಿ | ಪೂಜಯಿತ್ವಾ ಶನಿಂ ದೇವಂ ಲೋಹದೀಪೇ ಚ ತೈಲಕಮ್ || 17 ||
ಮಾಷಾನ್ ಅನ್ನಂ ಪ್ರದದ್ಯಾಚ್ಚ ದಕ್ಷಿಣಾಂ ಚ ಶಚೀಪತೇ | ಪ್ರತಿಮಾಂ ಲೋಹಜಾಂ ಕೃತ್ವಾ ಪೂಜಯಿತ್ವಾ ಯಥಾವಿಧಿ || 18 ||
ತೈಲಾಭಿಷೇಕಂ ದದ್ಯಾತ್ ಸ ಸರ್ವದುಃಖೈರ್ವಿಮುಚ್ಯತೇ | ದಶರಥೇನೈವಮುಕ್ತಶ್ಚ ಸೌರಿಶ್ಚಾಪಿ ವರಂ ದದೌ || 19 ||
|| ಇತಿ ದಶರಥ ವಿರಚಿತಂ ಶನೈಶ್ಚರ ಸ್ತೋತ್ರಂ ಸಂಪೂರ್ಣಮ್ ||
ಸ್ತೋತ್ರದ ಸಂರಚನೆ
ಈ ಸ್ತೋತ್ರವು ಪ್ರಮುಖವಾಗಿ ಮೂರು ಭಾಗಗಳನ್ನು ಒಳಗೊಂಡಿದೆ:
- ಶ್ಲೋಕ 1-10: ದಶರಥನು ಶನಿ ದೇವನ ಭೀಕರ ರೂಪ ಮತ್ತು ದಿವ್ಯ ಗುಣಗಳನ್ನು ಸ್ತುತಿಸುವುದು.
- ಶ್ಲೋಕ 11-13: ದಶರಥನ ಭಕ್ತಿಗೆ ಮೆಚ್ಚಿ ಶನಿ ದೇವನು ಪ್ರಸನ್ನನಾಗಿ ವರ ನೀಡುವುದು.
- ಶ್ಲೋಕ 14-19: ದಶರಥನು ಲೋಕ ಕಲ್ಯಾಣಕ್ಕಾಗಿ ವರ ಕೇಳುವುದು ಮತ್ತು ಸ್ತೋತ್ರದ ಫಲಶ್ರುತಿಯ ವಿವರಣೆ.
ನಿಮ್ಮ ಜಾತಕದಲ್ಲಿ ಶಶ ಯೋಗವಿದೆಯೇ? ಅಧಿಕಾರ, ಶಿಸ್ತು, ಸ್ಥಿರ ಯಶಸ್ಸಿನ ರಾಜಯೋಗ
ಸ್ತೋತ್ರದ ಫಲಶ್ರುತಿ
ಈ ಸ್ತೋತ್ರದ ನಿತ್ಯ ಪಠಣದಿಂದ ಈ ಕೆಳಗಿನ ಸತ್ಫಲಗಳು ದೊರೆಯುತ್ತವೆ:
- ಸಾಡೇಸಾತಿ ಪರಿಹಾರ: ಏಳೂವರೆ ಶನಿ, ಅಷ್ಟಮ ಶನಿ, ಪಂಚಮ ಶನಿ, ಅರ್ಧಾಷ್ಟಮ ಶನಿ (ನಾಲ್ಕನೇ ಸ್ಥಾನದಲ್ಲಿನ ಸಂಚಾರ) ಅಥವಾ ಶನಿ ದೆಸೆಯ ಪ್ರಭಾವದಿಂದ ಉಂಟಾಗುವ ಕಷ್ಟಗಳು ನಿವಾರಣೆಯಾಗುತ್ತವೆ.
- ಮಾನಸಿಕ ಶಾಂತಿ: ಅನಗತ್ಯ ಭಯ, ಆತಂಕ ಮತ್ತು ಮಾನಸಿಕ ಒತ್ತಡಗಳು ದೂರವಾಗಿ ಮನಸ್ಸು ಪ್ರಶಾಂತವಾಗುತ್ತದೆ.
- ಕಾರ್ಯ ಸಿದ್ಧಿ: ವೃತ್ತಿ ಅಥವಾ ವ್ಯವಹಾರದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಸಿಗುತ್ತದೆ.
- ಆರೋಗ್ಯ ವೃದ್ಧಿ: ಶಾರೀರಿಕ ಪೀಡೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಉಪಶಮನ ದೊರೆಯುತ್ತದೆ.
- ಸಮೃದ್ಧಿ: ದಶರಥನಿಗೆ ನೀಡಿದ ವರದಂತೆ, ಈ ಸ್ತೋತ್ರವಿರುವಲ್ಲಿ ಕ್ಷಾಮ ಮತ್ತು ದಾರಿದ್ರ್ಯ ಸುಳಿಯುವುದಿಲ್ಲ.
ಸಾಡೇಸಾತ್ ಅಥವಾ ಏಳರಾಟ ಶನಿ ಎಂದರೇನು? ಈ ಅವಧಿಯಲ್ಲಿ ತಪ್ಪಿಯೂ ಮಾಡಬಾರದ 7 ಕೆಲಸಗಳಿವು!
ಪಠಿಸುವ ವಿಧಾನ :
- ಪ್ರತಿ ಶನಿವಾರ ಸೂರ್ಯಾಸ್ತದ ನಂತರ ಎಳ್ಳೆಣ್ಣೆಯ ದೀಪ ಹಚ್ಚಿ ಶನಿ ದೇವನನ್ನು ಸ್ಮರಿಸಬೇಕು.
- ಈ ಸ್ತೋತ್ರವನ್ನು ಕನಿಷ್ಠ 11 ಬಾರಿ ಪಠಿಸುವುದು ಶ್ರೇಷ್ಠ. ಸಮಯವಿಲ್ಲದಿದ್ದರೆ 1 ಬಾರಿಯಾದರೂ ಭಕ್ತಿಯಿಂದ ಪಠಿಸಿ.
- ಸಾಧ್ಯವಾದರೆ ಶನಿವಾರದಂದು ಶಮಿ (ಬನ್ನಿ) ಎಲೆ ಅಥವಾ ಕಪ್ಪು ಎಳ್ಳನ್ನು ಅರ್ಪಿಸಿ ಪೂಜೆ ಮಾಡುವುದು ಹೆಚ್ಚು ಫಲಕಾರಿ.
ಲೇಖನ- ಶ್ರೀನಿವಾಸ ಮಠ





