ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ- ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ)
ನಾಲಗೆಗೆ ರುಚಿಯಾದದ್ದು ಅಥವಾ ಮನಸ್ಸಿಗೆ ಹಿತವೆನಿಸುವುದು ದೇಹಕ್ಕೆ ಪಥ್ಯವಾಗಬೇಕೆಂದಿಲ್ಲ. ಇದು ಭೌತಿಕ ದೇಹದ ಮೂಲ ಸಿದ್ಧಾಂತ. ನಮ್ಮ ದೇಹವು ಒಂದು ‘ಅಗ್ನಿ ಕುಂಡ’ವಿದ್ದಂತೆ. ಅಗ್ನಿಯ ಗುಣವೇ ಸುಡುವುದು; ಅದು ತನ್ನೊಳಗೆ ಬಿದ್ದ ದ್ರವವನ್ನು ಒಣಗಿಸಿ, ವಸ್ತುವನ್ನು ಭಸ್ಮ ಮಾಡುತ್ತದೆ. ನೀವು ಅಗ್ನಿಗೆ ಪ್ಲಾಸ್ಟಿಕ್ ಹಾಕಿದರೂ ಅದು ಸುಡುತ್ತದೆ, ಸುಗಂಧ ದ್ರವ್ಯ ಹಾಕಿದರೂ ಸುಡುತ್ತದೆ. ಆದರೆ ಅದು ಹೊರಹಾಕುವ ಹೊಗೆಯು ನಾವು ಹಾಕಿದ ವಸ್ತುವಿನ ಗುಣವನ್ನು ಅವಲಂಬಿಸಿರುತ್ತದೆ (ಪರಿಮಳ ಅಥವಾ ಘಾಟು).
ನಮ್ಮ ಜಠರಾಗ್ನಿಯೂ ಅಷ್ಟೇ. ನಾವು ಇಂದ್ರಿಯ ಸುಖಕ್ಕಾಗಿ ಏನನ್ನಾದರೂ ಹೊಟ್ಟೆಗೆ ಹಾಕಬಹುದು. ಸಮುದ್ರವು ಕಸವನ್ನು ದಡಕ್ಕೆ ತಳ್ಳುವಂತೆ ನಮ್ಮ ದೇಹವು ಕಸವನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಆದರೆ ಅತಿಯಾದಾಗ ಅಗ್ನಿಯಂತೆ ಎಲ್ಲವನ್ನೂ ಸುಡುವ ಪ್ರಕ್ರಿಯೆಯಲ್ಲಿ ದೇಹವು ರೋಗಗ್ರಸ್ತವಾಗುತ್ತದೆ ಮತ್ತು ಮನಸ್ಸಿನ ಸ್ವಾಸ್ಥ್ಯವೂ ಕೆಡುತ್ತದೆ.
ಒಂದೇ ಆಹಾರ, ಭಿನ್ನ ಪರಿಣಾಮ: ಯಾಕೀ ವೈವಿಧ್ಯ?
ಒಬ್ಬರಿಗೆ ಹಲಸಿನ ಹಣ್ಣು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ, ಮತ್ತೊಬ್ಬರಿಗೆ ಹೊಟ್ಟೆ ಉಬ್ಬರಿಸುತ್ತದೆ. ಇಬ್ಬರೂ ಮನುಷ್ಯರಾದರೂ ಈ ಭಿನ್ನತೆಗೆ ಕಾರಣವೇನು? ಇದಕ್ಕೆ ಉತ್ತರ ನಮ್ಮ ಜನ್ಮ ಜಾತಕ ಮತ್ತು ಗ್ರಹಗತಿಗಳಲ್ಲಿದೆ.
ಮನುಷ್ಯ ಹುಟ್ಟಿದ ಕ್ಷಣದ ಲಗ್ನ ಮತ್ತು ಗ್ರಹ ಸ್ಥಿತಿಗಳು ಆತನ ದೇಹಕ್ಕೆ ಯಾವ ಆಹಾರ ಪಥ್ಯ, ಯಾವುದು ಅಪಥ್ಯ ಎಂಬುದನ್ನು ಮೊದಲೇ ನಿರ್ಧರಿಸಿರುತ್ತವೆ. ಕೇವಲ ಲಗ್ನವೊಂದನ್ನೇ ನೋಡದೆ, ಲಗ್ನಾಧಿಪತಿ, ಚಂದ್ರ, ಚಂದ್ರ ರಾಶ್ಯಾಧಿಪತಿ ಮತ್ತು ಆತ್ಮಕಾರಕ ಗ್ರಹರ ಬಲಾಬಲಗಳನ್ನು ವಿಮರ್ಶಿಸುವುದು ಅತ್ಯಗತ್ಯ.
ಬೆಳ್ಳಿ ಪಾತ್ರೆಗಳ ಬಳಕೆ ಸಂಪ್ರದಾಯದ ಹಿಂದಿನ ಆರೋಗ್ಯ, ಜ್ಯೋತಿಷ್ಯ, ಆಧ್ಯಾತ್ಮಿಕ ರಹಸ್ಯ
ಜ್ಯೋತಿಷ್ಯ ಶಾಸ್ತ್ರದ ಅನ್ವಯ ಆಹಾರ ವಿಮರ್ಶೆ
ಆಹಾರದ ವಿಚಾರಕ್ಕೆ ಬಂದಾಗ ಜಾತಕದ ಕೆಲವು ನಿರ್ದಿಷ್ಟ ಸ್ಥಾನಗಳು ಮುಖ್ಯವಾಗುತ್ತವೆ:
- ದ್ವಿತೀಯ ಸ್ಥಾನ: ಆಹಾರದ ಗುಣಮಟ್ಟ ಮತ್ತು ಆಹಾರ ಸೇವನೆಯ ರೀತಿ.
- ತೃತೀಯ ಸ್ಥಾನ: ಆಹಾರ ಬೇಯಿಸುವ ಪಾತ್ರೆ ಮತ್ತು ಅಡುಗೆಯ ವಿಧಾನ (ಶಾಖ).
ಗ್ರಹಗಳ ಆಧಾರದ ಮೇಲೆ ಸೂಕ್ತ ಆಹಾರದ ಪಟ್ಟಿ:
| ಗ್ರಹ | ಆಹಾರದ ಸ್ವರೂಪ | ಉದಾಹರಣೆ |
| ಚಂದ್ರ | ದ್ರವಯುಕ್ತ ಮತ್ತು ಮೆದು ಆಹಾರ | ಹಾಲು, ಗಂಜಿ, ಪಾನೀಯಗಳು |
| ಕುಜ | ಕ್ಷಾರಯುಕ್ತ ಮತ್ತು ಟ್ಟಿ ಆಹಾರ | ಖಾರ ಮತ್ತು ಗಟ್ಟಿಯಾದ ಪದಾರ್ಥಗಳು |
| ರವಿ | ಪೂರ್ಣ ಪ್ರಮಾಣದಲ್ಲಿ ಬೆಂದಿರದ, ಗಟ್ಟಿ ಆಹಾರ | ಕಾಳುಗಳು, ಗೋಧಿ ಪದಾರ್ಥಗಳು |
| ಬುಧ | ಕ್ಯಾಲ್ಸಿಯಂ ಮತ್ತು ಹಸಿರು ತರಕಾರಿ | ಪಲಾವ್, ಸಲಾಡ್, ಸೊಪ್ಪುಗಳು |
| ಗುರು | ಸಿಹಿ ಮಿಶ್ರಿತ ಮೆದು ಆಹಾರ | ಪೊಂಗಲ್, ಕೇಸರಿಬಾತ್, ಪಾಯಸ |
| ಶುಕ್ರ | ಹುಳಿ ಮಿಶ್ರಿತ (Citrate) ಆಹಾರ | ಚಿತ್ರಾನ್ನ, ಪುಳಿಯೋಗರೆ, ನಿಂಬೆ ಹಣ್ಣಿನ ಬಳಕೆ |
| ಶನಿ | ನಾರಿನಂಶ (Fiber) ಇರುವ ಆಹಾರ | ತರಕಾರಿಗಳು, ರಾಗಿ, ಸಿರಿಧಾನ್ಯಗಳು |
| ರಾಹು/ಕೇತು | ಅತಿಯಾದ ತಿನ್ನುವ ಹವ್ಯಾಸ ಅಥವಾ ಕರಟಿದ ಆಹಾರ | ಹುರಿದ ಪದಾರ್ಥಗಳು, ಅತಿಯಾದ ಮಸಾಲೆ |
ಕೊನೆಮಾತು:
ನಮ್ಮ ಜಾತಕದ ದ್ವಿತೀಯಾಧಿಪತಿ ಇರುವ ನಕ್ಷತ್ರ ಮತ್ತು ಯುತಿಯನ್ನು ಗಮನಿಸಿ ಆಹಾರ ಕ್ರಮವನ್ನು ರೂಪಿಸಿಕೊಂಡರೆ, ಆರೋಗ್ಯವು ಸ್ಥಿರವಾಗಿರುತ್ತದೆ. ಪ್ರಕೃತಿ ಮತ್ತು ಜ್ಯೋತಿಷ್ಯದ ಈ ನಿಯಮಗಳನ್ನು ಅರಿತು ಆಹಾರ ಸೇವಿಸುವುದು ದೀರ್ಘಾಯುಷ್ಯಕ್ಕೆ ದಾರಿಯಾಗಿದೆ.
ನಿರೂಪಣೆ: ಶ್ರೀನಿವಾಸ ಮಠ





