ಲೇಖನ – ಪ್ರಕಾಶ್ ಅಮ್ಮಣ್ಣಾಯ
ರಸಾಯನ ಶಾಸ್ತ್ರದಲ್ಲಿ (Chemistry) ಒಂದು ಕೆಮಿಕಲ್ ಈಕ್ವೇಶನ್ (Chemical Equation) ಎಷ್ಟು ಮುಖ್ಯವೋ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಿತಿ-ಗತಿಗಳ ವಿಮರ್ಶೆಯೂ ಅಷ್ಟೇ ಪ್ರಧಾನ. ರಸಾಯನಶಾಸ್ತ್ರದಲ್ಲಿ ಮಿಶ್ರಣಗಳ ಪ್ರಮಾಣ ಸ್ವಲ್ಪ ವ್ಯತ್ಯಾಸವಾದರೂ ಬರುವ ಫಲಿತಾಂಶ (Product) ಹೇಗೆ ಬದಲಾಗುತ್ತದೆಯೋ ಜ್ಯೋತಿಷ್ಯದಲ್ಲೂ ಕಾಲ, ಅಂಶ ಮತ್ತು ಬಲಗಳ ಗಣಿತ ಕಿಂಚಿತ್ ಬದಲಾದರೂ ಭವಿಷ್ಯವಾಣಿ ಸಂಪೂರ್ಣ ವ್ಯತ್ಯಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ‘AI Astrology’ ಅಥವಾ ಕೃತಕ ಬುದ್ಧಿಮತ್ತೆಯ ಜ್ಯೋತಿಷ್ಯ ಬಹಳ ಸದ್ದು ಮಾಡುತ್ತಿದೆ. ಆದರೆ ಜ್ಯೋತಿಷ್ಯ ಎಂಬುದು ಕೇವಲ ದತ್ತಾಂಶಗಳ (Data) ಲೆಕ್ಕಾಚಾರವಲ್ಲ; ಅದೊಂದು ನಿಗೂಢ ಕಿರಣಗಳ ವಿಜ್ಞಾನ.
ಫಲ ನಿರ್ಣಯದ ಹಿಂದಿರುವ ಸಂಕೀರ್ಣ ಸಮೀಕರಣಗಳು
ಒಬ್ಬ ಪರಿಣತ ಜ್ಯೋತಿಷಿ ಫಲ ನಿರ್ಣಯಕ್ಕೆ ಬರುವ ಮುನ್ನ ಹತ್ತಾರು ಆಯಾಮಗಳನ್ನು ವಿಮರ್ಶಿಸಬೇಕಾಗುತ್ತದೆ.
- ಗ್ರಹಗಳ ಬಲ: ಷಡ್ಬಲಗಳಾದ ಕಾಲ ಬಲ, ಆಯನ ಬಲ, ಪಕ್ಷ ಬಲ, ಋತು-ಸಂವತ್ಸರ ಬಲ, ಚೇಷ್ಟಾ ಬಲ ಮತ್ತು ದಿಗ್ಬಲಗಳನ್ನು ಅಳೆಯುವುದು ಅನಿವಾರ್ಯ.
- ಸಂಬಂಧಗಳ ಸೂಕ್ಷ್ಮತೆ: ರಾಶಿಗೆ ಯಾರು ಕಾರಕ? ಯಾರು ಮಾರಕ? ತಾತ್ಕಾಲಿಕ ಮತ್ತು ಶಾಶ್ವತ ಮಿತ್ರ-ಶತ್ರುಗಳಾರು? ಎಂಬುದು ಮುಖ್ಯ.
- ಸ್ಥಾನ ಬಲದ ವೈರುಧ್ಯ: ಉದಾಹರಣೆಗೆ, ದಕ್ಷಿಣಾಯನದಲ್ಲಿ ರವಿಗೆ ಬಲ ಕಡಿಮೆ, ರಾತ್ರಿಯಂತೂ ಅವನು ಬಲಹೀನ. ಇಂತಹ ರವಿಯು ದಶಮ ಭಾವದಲ್ಲಿ (ದಿಗ್ಬಲ ಸ್ಥಾನ) ಇದ್ದಾಗ, ಅಲ್ಲಿ ಬಲವೋ ಅಥವಾ ಬಲಹೀನತೆಯೋ ಎಂಬುದನ್ನು ತರ್ಕಬದ್ಧವಾಗಿ ಯೋಚಿಸಬೇಕು.
ಅಂಶ ಬಲ: ಸೂಕ್ಷ್ಮತೆಯ ಪರಮಾವಧಿ
ರಾಶಿಯಲ್ಲಿ ದುರ್ಬಲವಾಗಿರುವ ಗ್ರಹವು ಅಂಶದಲ್ಲಿ ಬಲಿಷ್ಠವಾಗಿದ್ದರೆ ಫಲವೇ ಬೇರೆಯಾಗುತ್ತದೆ. ಒಂದು ರಾಶಿಯ 30 ಡಿಗ್ರಿಯನ್ನು 1800 ಭಾಗಗಳಾಗಿ ವಿಂಗಡಿಸಿ ನೋಡುವ ಸೂಕ್ಷ್ಮತೆ ನಮ್ಮ ಶಾಸ್ತ್ರದಲ್ಲಿದೆ.
- ತ್ರಿಂಶಾಂಶ, ದ್ರೇಕ್ಕಾಣ, ದಶಾಂಶ, ದ್ವಾದಶಾಂಶಗಳ ಮೂಲಕ ಗ್ರಹದ ನೈಜ ಸಾಮರ್ಥ್ಯವನ್ನು ಅರಿಯಬಹುದು.
- ರಾಶಿ ಸ್ಥಿತಿಯಲ್ಲಿ ಸೋತ ಗ್ರಹವು ಅಂಶದಲ್ಲಿ ಗೆದ್ದಿದ್ದರೆ, ಅದಕ್ಕೆ ಪೂರಕವಾದ ಪರಿಹಾರಗಳನ್ನು ಸೂಚಿಸಲು ಸಾಧ್ಯ.
- ಉದಾಹರಣೆ: ಕೆಸರಿನ ಮಧ್ಯೆ ಸಿಲುಕಿದ ಆನೆಯು ನಡೆಯಲಾಗದೆ ಒದ್ದಾಡುತ್ತಿರುವಾಗ, ಅದನ್ನು ಆನೆಯ ‘ಬಲ’ ಎನ್ನಲಾಗದು. ಹಾಗೆಯೇ ರಾಶಿಯಲ್ಲಿ ಚೆನ್ನಾಗಿದ್ದು, ಪರಿಸ್ಥಿತಿಯಲ್ಲಿ ಸಿಲುಕಿದ ಗ್ರಹದ ಸ್ಥಿತಿಯನ್ನು ಜ್ಯೋತಿಷಿ ಮಾತ್ರ ಗುರುತಿಸಬಲ್ಲ.
AI ಜ್ಯೋತಿಷ್ಯದ ಮಿತಿಗಳು
AI ತಂತ್ರಜ್ಞಾನಕ್ಕೆ ಪಂಡಿತರೇ ಮಾಹಿತಿ ನೀಡಿದ್ದರೂ ಅದಕ್ಕೆ ‘ದೇಶ-ಕಾಲ-ವರ್ತಮಾನ’ಗಳ ಅರಿವಿರುವುದಿಲ್ಲ.
- ಪರಿಸರ ಮತ್ತು ಶಕುನ: ಜ್ಯೋತಿಷ್ಯ ಹೇಳುವಾಗ ಆ ಕ್ಷಣದ ವಾತಾವರಣ, ಜಾತಕ ಕೇಳಲು ಬಂದವರ ಮನಸ್ಥಿತಿ ಮತ್ತು ಗೋಚರಿಸುವ ಶಕುನಗಳು ಬಹಳ ಮುಖ್ಯ. ಯಂತ್ರಕ್ಕೆ ಈ ಸಂವೇದನೆ ಇರುವುದಿಲ್ಲ.
- ಅನ್ವಯಿಕ ತರ್ಕ: ಶನಿಗೆ ಸಪ್ತಮವು ದಿಗ್ಬಲ. ಆದರೆ ಆ ಸಪ್ತಮವು ಕುಂಭ, ತುಲಾ ಅಥವಾ ಮಕರವಾಗಿದ್ದರೆ ಮಾತ್ರ ಅದು ಮಹಾಬಲ. ಇಲ್ಲದಿದ್ದರೆ ಬಲದ ಹಾದಿ ತಪ್ಪಿ ಫಲ ಶೂನ್ಯವಾಗುತ್ತದೆ. ಈ ರೀತಿಯ ‘Contextual Logic’ ಕೃತಕ ಬುದ್ಧಿಮತ್ತೆಗೆ ಇನ್ನೂ ಸಿದ್ಧಿಸಿಲ್ಲ.
ಲೇಖಕರ ಅಭಿಮತ: ಜ್ಯೋತಿಷ್ಯವೆಂದರೆ ಅದು ಗ್ರಹಗಳ ಕಿರಣಗಳ ವರ್ಣ ವಿನಿಮಯ ತತ್ವ. ಇದು ಒಂದು ಕೆಮಿಕಲ್ ರಿಯಾಕ್ಷನ್ ಇದ್ದಂತೆ. ಇದನ್ನು ಕೇವಲ ಸಾಫ್ಟ್ವೇರ್ ಮೂಲಕ ನೋಡಿ ನಂಬುವುದು ಜನರನ್ನು ದಾರಿ ತಪ್ಪಿಸಬಹುದು. ಒಬ್ಬ ಅನುಭವಿ ಜ್ಯೋತಿಷಿ ಮಾತ್ರ ಇವೆಲ್ಲವನ್ನೂ ಸಮತೋಲನದಲ್ಲಿಟ್ಟು, ಸರಿಯಾದ ನಿರ್ಣಯ ನೀಡಲು ಸಾಧ್ಯ.
ನಿರೂಪಣೆ- ಶ್ರೀನಿವಾಸ ಮಠ









