Sri Gurubhyo Logo

ಯಕ್ಷಪ್ರಶ್ನೆ: ಸತ್ತ ತಮ್ಮಂದಿರನ್ನು ಬದುಕಿಸಲು ಯುಧಿಷ್ಠಿರ ನೀಡಿದ ಉತ್ತರಗಳಿವು; ಇಂದಿನ ಬದುಕಿನ ಪ್ರತಿ ಸಮಸ್ಯೆಗೂ ಇಲ್ಲಿವೆ ಶಾಶ್ವತ ಪರಿಹಾರಗಳು!

Yudhishthira answering Yaksha questions near the lake in Mahabharata
ಪ್ರಾತಿನಿಧಿಕ ಚಿತ್ರ

“ನೀನು ಧರ್ಮರಾಯನಂಥನವನು” ಎಂಬ ಮಾತನ್ನು ನಿತ್ಯದಲ್ಲಿಯೂ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಸಿಕೊಳ್ಳುತ್ತೇವೆ, ಎಷ್ಟೋ ಬಾರಿ ನಾವೇ ಆ ಮಾತನ್ನು ಬಳಸುತ್ತೇವೆ. ಯುಗ ಕಳೆದರೂ ನಮ್ಮ ಮಧ್ಯೆ ಬದುಕಿರುವ ಮಹಾನ್ ಆದರ್ಶ ವ್ಯಕ್ತಿಗಳಲ್ಲಿ ಯುಧಿಷ್ಠಿರ ಸಹ ಒಬ್ಬ. ಮಹಾಭಾರತದ ಎಷ್ಟೋ ಪಾತ್ರಗಳು ಆಕರ್ಷಕ, ಸೂಜಿಗಲ್ಲಿನಂತೆ ಸೆಳೆಯುತ್ತವೆ. ಆದರೆ ವೇದವ್ಯಾಸರ ಪಾತ್ರ ಪ್ರಪಂಚದಲ್ಲಿ ಧರ್ಮರಾಯನ ತೂಕ ಬೇರೆಯದೇ. ನಾವು ನಿತ್ಯವೂ ಎದುರಿಸುವ ‘ಯಕ್ಷಪ್ರಶ್ನೆ’ಗೆ ಸಾಕ್ಷಾತ್ ಆ ಧರ್ಮರಾಯ ಯುಗದ ಹಿಂದೆಯೇ ಉತ್ತರ ನೀಡಿದ್ದಾನೆ. ಅಂಥ ಸೂಕ್ತವಾದ- ನ್ಯಾಯೋಚಿತವಾದ ಉತ್ತರ ಕೇಳಿದ ಮೇಲೆ, ಇಲ್ಲ ಇದು ಹೀಗಲ್ಲ, ಹಾಗೆ ಹೇಳಬೇಕಿತ್ತು ಎಂದೆನಿಸದಂಥ ಉತ್ತರಗಳವು. ಮಹಾಭಾರತದ ವನಪರ್ವದಲ್ಲಿ ಬರುವ ‘ಯಕ್ಷಪ್ರಶ್ನೆ’ಗಳು ಮತ್ತು ಅದಕ್ಕೆ ಯುಧಿಷ್ಠಿರನ ಉತ್ತರಗಳು ಇಲ್ಲಿವೆ. 

ಯಕ್ಷಪ್ರಶ್ನೆ ಹಿನ್ನೆಲೆ:

ಪಾಂಡವರು ವನವಾಸದ ಕೊನೆಯ ಅವಧಿಯಲ್ಲಿ ಇದ್ದಾಗ, ‘ವನಪರ್ವ’ದಲ್ಲಿ ಒಂದು ಘಟನೆ ನಡೆಯುತ್ತದೆ. ಒಬ್ಬ ಬ್ರಾಹ್ಮಣನ ಅರಣಿ (ಯಜ್ಞಕ್ಕೆ ಬಳಸುವ ಮರದ ತುಂಡುಗಳು) ಜಿಂಕೆಯೊಂದರ ಕೊಂಬಿನಲ್ಲಿ ಸಿಲುಕಿ ಓಡಿಹೋಗುತ್ತದೆ. ಅದನ್ನು ಹಿಡಿದು ತರಲು ಹೊರಟ ಪಾಂಡವರು ದಟ್ಟವಾದ ಅರಣ್ಯದಲ್ಲಿ ದಾರಿ ತಪ್ಪುತ್ತಾರೆ. ಬಿಸಿಲಿನ ತಾಪಕ್ಕೆ ಎಲ್ಲರೂ ತೀವ್ರ ಬಾಯಾರಿಕೆಯಿಂದ ಬಳಲುತ್ತಾರೆ. ಧರ್ಮರಾಜನು ಮೊದಲು ನಕುಲನನ್ನು ನೀರು ಹುಡುಕಲು ಕಳುಹಿಸುತ್ತಾನೆ. ನಕುಲನು ಒಂದು ಸುಂದರವಾದ ಸರೋವರವನ್ನು ಕಾಣುತ್ತಾನೆ. ಅವನು ನೀರು ಕುಡಿಯಲು ಮುಂದಾದಾಗ ಅಶರೀರವಾಣಿಯೊಂದು ಕೇಳಿಸುತ್ತದೆ: ಹೇ ಮಾದ್ರಿಪುತ್ರ, ಸಾಹಸ ಮಾಡಬೇಡ. ಸರೋವರವು ನನ್ನದು. ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸು, ನಂತರ ನೀರು ಕುಡಿ.” ಆದರೆ ಬಾಯಾರಿಕೆಯ ಆತುರದಲ್ಲಿದ್ದ ನಕುಲನು ಅದನ್ನು ನಿರ್ಲಕ್ಷಿಸಿ, ನೀರು ಕುಡಿದು ತಕ್ಷಣವೇ ಪ್ರಾಣ ಕಳೆದುಕೊಳ್ಳುತ್ತಾನೆ.

ನಕುಲನು ಬಾರದಿರುವುದನ್ನು ಕಂಡು ಧರ್ಮರಾಜನು ಅನುಕ್ರಮವಾಗಿ ಸಹದೇವ, ಅರ್ಜುನ ಮತ್ತು ಭೀಮರನ್ನು ಕಳುಹಿಸುತ್ತಾನೆ. ಆದರೆ ಎಲ್ಲರೂ ಅದೇ ರೀತಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ನೀರು ಕುಡಿದು ಶವಗಳಂತೆ ಕೆಳಕ್ಕೆ ಬೀಳುತ್ತಾರೆ. ಅಂತಿಮವಾಗಿ ತನ್ನ ಸೋದರರನ್ನು ಹುಡುಕುತ್ತಾ ಧರ್ಮರಾಜನೇ ಆ ಸರೋವರದ ಬಳಿ ಬರುತ್ತಾನೆ. ತನ್ನ ಸೋದರರು ಮೃತಪಟ್ಟಿರುವುದನ್ನು ಕಂಡು ದುಃಖವಾದರೂ ಅಲ್ಲಿನ ಪರಿಸ್ಥಿತಿಯನ್ನು ಅರಿತು, ಇದು ಯಾವುದೋ ದೈವೀ ಮಾಯೆ ಎಂದು ಗ್ರಹಿಸುತ್ತಾನೆ. ಆಗ ಬೃಹದಾಕಾರದ ಯಕ್ಷನು ಪ್ರತ್ಯಕ್ಷನಾಗಿ ತನ್ನ ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕುತ್ತಾನೆ. ಧರ್ಮರಾಜನು ಶಾಂತಚಿತ್ತನಾಗಿ ಉತ್ತರಿಸಲು ಸಿದ್ಧನಾಗುತ್ತಾನೆ.

ಅರವತ್ತನಾಲ್ಕು ಬಗೆಯ ಭಕ್ಷ್ಯ-ಭೋಜ್ಯಗಳು: ದಕ್ಷಿಣ ಭಾರತದ ಸಾಂಪ್ರದಾಯಿಕ ಅಡುಗೆ ಮತ್ತು ವೈದಿಕ ಹಿನ್ನೆಲೆಯ ಸಂಪೂರ್ಣ ಮಾಹಿತಿ

ಪ್ರಶ್ನೋತ್ತರಗಳ ಮಾಲೆ (ಸಂಪೂರ್ಣ ವಿವರ)

ಯಕ್ಷ: ಸೂರ್ಯನನ್ನು ಬೆಳಗುವಂತೆ ಮಾಡುವುದು ಯಾವುದು? ಅವನ ಜೊತೆಗಾರರು ಯಾರು? ಅವನನ್ನು ಅಸ್ತಮಿಸುವಂತೆ ಮಾಡುವುದು ಯಾವುದು? ಮತ್ತು ಅವನು ಯಾವುದರಲ್ಲಿ ನೆಲೆಸಿದ್ದಾನೆ?

ಯುಧಿಷ್ಠಿರ: ಸೂರ್ಯನನ್ನು ಬ್ರಹ್ಮನು ಬೆಳಗಿಸುತ್ತಾನೆ. ದೇವತೆಗಳು ಅವನ ಜೊತೆಗಾರರು. ಧರ್ಮವು ಅವನು ಅಸ್ತಮಿಸುವುದಕ್ಕೆ ಕಾರಣವಾಗುತ್ತದೆ ಮತ್ತು ಅವನು ಸತ್ಯದಲ್ಲಿ ನೆಲೆಸಿದ್ದಾನೆ.

ಯಕ್ಷ: ಮನುಷ್ಯನು ಯಾವುದರಿಂದ ಶ್ರೋತ್ರಿಯನಾಗುತ್ತಾನೆ (ವೇದ ಜ್ಞಾನಿ)? ಯಾವುದರಿಂದ ಶ್ರೇಷ್ಠತ್ವವನ್ನು ಪಡೆಯುತ್ತಾನೆ? ಯಾವುದರಿಂದ ಸ್ಥಿರನಾಗುತ್ತಾನೆ? ಯಾವುದರಿಂದ ಬುದ್ಧಿವಂತನಾಗುತ್ತಾನೆ?

ಯುಧಿಷ್ಠಿರ: ಮನುಷ್ಯನು ಶ್ರುತಿ (ಕೇಳುವ ಜ್ಞಾನ) ಯಿಂದ ಶ್ರೋತ್ರಿಯನಾಗುತ್ತಾನೆ. ತಪಸ್ಸಿನಿಂದ ಶ್ರೇಷ್ಠತ್ವ ಪಡೆಯುತ್ತಾನೆ. ಧೈರ್ಯದಿಂದ ಸ್ಥಿರನಾಗುತ್ತಾನೆ ಮತ್ತು ಹಿರಿಯರ ಸೇವೆಯಿಂದ ಬುದ್ಧಿವಂತನಾಗುತ್ತಾನೆ.

ಯಕ್ಷ: ಬ್ರಾಹ್ಮಣರಲ್ಲಿ ದೈವತ್ವ ಯಾವುದು? ಅವರಲ್ಲಿರುವ ಧರ್ಮ ಯಾವುದು? ಮನುಷ್ಯ ಭಾವ ಯಾವುದು? ಅಧರ್ಮ ಯಾವುದು? 

ಯುಧಿಷ್ಠಿರ: ಬ್ರಾಹ್ಮಣರಲ್ಲಿ ವೇದಾಧ್ಯಯನವೇ ದೈವತ್ವ. ತಪಸ್ಸೇ ಅವರ ಧರ್ಮ. ಮರಣವೇ ಅವರ ಮನುಷ್ಯ ಭಾವ ಮತ್ತು ಪರನಿಂದೆಯೇ ಅಧರ್ಮ.

ಯಕ್ಷ: ಕ್ಷತ್ರಿಯರಲ್ಲಿ ದೈವತ್ವ ಯಾವುದು? ಅವರ ಧರ್ಮ ಯಾವುದು? ಮನುಷ್ಯ ಭಾವ ಯಾವುದು? ಅಧರ್ಮ ಯಾವುದು?

ಯುಧಿಷ್ಠಿರ: ಕ್ಷತ್ರಿಯರಲ್ಲಿ ಬಾಣವಿದ್ಯೆ (ಶಸ್ತ್ರಾಸ್ತ್ರ) ದೈವತ್ವ. ಯಜ್ಞವೇ ಅವರ ಧರ್ಮ. ಭಯವೇ ಅವರ ಮನುಷ್ಯ ಭಾವ ಮತ್ತು ಶರಣಾದವರನ್ನು ಕೈಬಿಡುವುದೇ ಅಧರ್ಮ

ಯಕ್ಷ: ಭೂಮಿಗಿಂತ ಭಾರವಾದದ್ದು ಯಾವುದು? ಆಕಾಶಕ್ಕಿಂತ ಎತ್ತರವಾದದ್ದು ಯಾವುದು? ಗಾಳಿಗಿಂತ ವೇಗವಾದದ್ದು ಯಾವುದು? ಹುಲ್ಲಿಗಿಂತ ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಯಾವುದು?

ಯುಧಿಷ್ಠಿರ: ಮಗುವನ್ನು ಹೊತ್ತು ಸಲಹುವ ತಾಯಿ ಭೂಮಿಗಿಂತ ಭಾರವಾದವಳು. ತಂದೆ ಆಕಾಶಕ್ಕಿಂತ ಎತ್ತರದವನು. ಮನಸ್ಸು ಗಾಳಿಗಿಂತ ವೇಗವಾದದ್ದು ಮತ್ತು ನಮ್ಮ ಚಿಂತೆಗಳು ಹುಲ್ಲಿಗಿಂತಲೂ ಹೆಚ್ಚಾಗಿವೆ.

ಯಕ್ಷ: ನಿದ್ರೆಯಲ್ಲೂ ಕಣ್ಣು ಮುಚ್ಚದ್ದು ಯಾವುದು? ಹುಟ್ಟಿದರೂ ಚಲಿಸದಿರುವುದು ಯಾವುದು? ಹೃದಯವಿಲ್ಲದ್ದು ಯಾವುದು? ವೇಗವಾಗಿ ಬೆಳೆಯುವುದು ಏನು? 

ಯುಧಿಷ್ಠಿರ: ಮೀನು ನಿದ್ರೆಯಲ್ಲೂ ಕಣ್ಣು ಮುಚ್ಚದು. ಮೊಟ್ಟೆ ಹುಟ್ಟಿದರೂ ಚಲಿಸದು. ಕಲ್ಲು ಹೃದಯವಿಲ್ಲದ್ದು ಮತ್ತು ನದಿ ವೇಗವಾಗಿ ಬೆಳೆಯುತ್ತದೆ.

ಯಕ್ಷ: ಪ್ರಯಾಣಿಕನಿಗೆ ಮಿತ್ರ ಯಾರು? ಮನೆಯಲ್ಲಿರುವವನಿಗೆ ಮಿತ್ರ ಯಾರು? ರೋಗಿಗೆ ಮತ್ತು ಸಾಯುವವನಿಗೆ ಮಿತ್ರ ಯಾರು? 

ಯುಧಿಷ್ಠಿರ: ಪ್ರಯಾಣದಲ್ಲಿರುವವನಿಗೆ ಆತನ ವಿದ್ಯೆಯೇ ಮಿತ್ರ. ಮನೆಯಲ್ಲಿರುವವನಿಗೆ ಪತ್ನಿಯೇ ಮಿತ್ರ. ರೋಗಿಗೆ ವೈದ್ಯನೇ ಮಿತ್ರ ಮತ್ತು ಸಾಯುವವನಿಗೆ ಆತ ಮಾಡಿದ ದಾನವೇ ಮಿತ್ರ.

ಯಕ್ಷ: ಅತಿಥಿ ಎಂದರೆ ಯಾರು? ಸನಾತನ ಧರ್ಮ ಯಾವುದು? ಅಮೃತ ಅಂದರೆ ಏನು? ಈ ಪ್ರಪಂಚವೆಲ್ಲಾ ಯಾವುದರಿಂದ ತುಂಬಿದೆ?

ಯುಧಿಷ್ಠಿರ: ಎಲ್ಲ ಜೀವಿಗಳಿಗೂ ಅಗ್ನಿಯೇ ಅತಿಥಿ. ಅಮೃತವು ಹಸುವಿನ ಹಾಲು. ಸತ್ಯವೇ ಸನಾತನ ಧರ್ಮ ಮತ್ತು ಈ ಪ್ರಪಂಚವೆಲ್ಲಾ ಗಾಳಿಯಿಂದ ತುಂಬಿದೆ.

ಯಕ್ಷ: ಒಂಟಿಯಾಗಿ ಯಾರು ಚಲಿಸುತ್ತಾರೆ? ಹುಟ್ಟಿದರೂ ಮರುಹುಟ್ಟು ಪಡೆಯುವುದು ಯಾವುದು? ಶೀತಕ್ಕೆ ಮದ್ದು ಯಾವುದು? ಅತಿದೊಡ್ಡ ಭೂಮಿ ಯಾವುದು?

ಯುಧಿಷ್ಠಿರ: ಸೂರ್ಯನು ಒಬ್ಬನೇ ಚಲಿಸುತ್ತಾನೆ. ಚಂದ್ರನು ಮರುಹುಟ್ಟು ಪಡೆಯುತ್ತಾನೆ. ಅಗ್ನಿಯೇ ಶೀತಕ್ಕೆ ಮದ್ದು ಮತ್ತು ಧರ್ಮವೇ ಅತಿದೊಡ್ಡ ಭೂಮಿ (ಆಧಾರ).

ಯಕ್ಷ: ಧರ್ಮದ ಅಂತಿಮ ನೆಲೆ ಯಾವುದು? ಕೀರ್ತಿಯ ನೆಲೆ ಯಾವುದು? ಸ್ವರ್ಗದ ನೆಲೆ ಯಾವುದು? ಸುಖದ ನೆಲೆ ಯಾವುದು?

ಯುಧಿಷ್ಠಿರ: ಧರ್ಮದ ನೆಲೆ ದಕ್ಷತೆ. ಕೀರ್ತಿಯ ನೆಲೆ ದಾನ. ಸ್ವರ್ಗದ ನೆಲೆ ಸತ್ಯ ಮತ್ತು ಸುಖದ ನೆಲೆ ಶೀಲ (ನಡತೆ).

ಯಕ್ಷ: ಮನುಷ್ಯನ ಆತ್ಮ ಯಾರು? ದೈವದಿಂದ ಬಂದ ಮಿತ್ರ ಯಾರು? ಮನುಷ್ಯನ ಜೀವನದ ಆಧಾರ ಯಾವುದು? ಅವನ ಅಂತಿಮ ಆಶ್ರಯ ಯಾವುದು?

ಯುಧಿಷ್ಠಿರ: ಮಗನೇ ಮನುಷ್ಯನ ಆತ್ಮ. ಪತ್ನಿಯೇ ದೈವದತ್ತ ಮಿತ್ರ. ಮೇಘಗಳೇ (ಮಳೆ) ಜೀವನಾಧಾರ ಮತ್ತು ದಾನವೇ ಅಂತಿಮ ಆಶ್ರಯ.

ಯಕ್ಷ: ಅತಿ ಶ್ರೇಷ್ಠವಾದ ಧನ ಯಾವುದು? ಲಾಭಗಳಲ್ಲಿ ಶ್ರೇಷ್ಠವಾದದ್ದು ಯಾವುದು? ಸುಖಗಳಲ್ಲಿ ಶ್ರೇಷ್ಠವಾದದ್ದು ಯಾವುದು? 

ಯುಧಿಷ್ಠಿರ: ವಿದ್ಯೆಯೇ ಶ್ರೇಷ್ಠ ಧನ. ಆರೋಗ್ಯವೇ ಶ್ರೇಷ್ಠ ಲಾಭ. ತೃಪ್ತಿಯೇ ಶ್ರೇಷ್ಠ ಸುಖ.

ಯಕ್ಷ: ಯಾವುದನ್ನು ಬಿಟ್ಟರೆ ಮನುಷ್ಯ ಎಲ್ಲರಿಗೂ ಪ್ರಿಯನಾಗುತ್ತಾನೆ? ಯಾವುದನ್ನು ಬಿಟ್ಟರೆ ಶೋಕಿಸುವುದಿಲ್ಲ? ಯಾವುದನ್ನು ಬಿಟ್ಟರೆ ಶ್ರೀಮಂತನಾಗುತ್ತಾನೆ? ಯಾವುದನ್ನು ಬಿಟ್ಟರೆ ಸುಖಿಯಾಗುತ್ತಾನೆ? 

ಯುಧಿಷ್ಠಿರ: ಅಹಂಕಾರ ಬಿಟ್ಟರೆ ಪ್ರಿಯನಾಗುತ್ತಾನೆ. ಕೋಪ ಬಿಟ್ಟರೆ ಶೋಕಿಸುವುದಿಲ್ಲ. ಆಸೆ ಬಿಟ್ಟರೆ ಶ್ರೀಮಂತನಾಗುತ್ತಾನೆ ಮತ್ತು ಲೋಭ (ದುರಾಸೆ) ಬಿಟ್ಟರೆ ಸುಖಿಯಾಗುತ್ತಾನೆ.

ಯಕ್ಷ: ಬ್ರಾಹ್ಮಣತ್ವಕ್ಕೆ ಕಾರಣವೇನು? ಜನ್ಮವೋ ನಡತೆಯೋ ಅಥವಾ ಪಾಂಡಿತ್ಯವೋ?

ಯುಧಿಷ್ಠಿರ: ಕುಲ ಅಥವಾ ಪಾಂಡಿತ್ಯ ಬ್ರಾಹ್ಮಣತ್ವಕ್ಕೆ ಕಾರಣವಲ್ಲ. ಕೇವಲ ನಡತೆ (ಚಾರಿತ್ರ್ಯ) ಮಾತ್ರ ಒಬ್ಬನನ್ನು ಬ್ರಾಹ್ಮಣನನ್ನಾಗಿ ಮಾಡುತ್ತದೆ. ನಡತೆ ಕೆಟ್ಟವನು ಎಷ್ಟೇ ಓದಿದ್ದರೂ ಅಧಮನೇ.

ಯಕ್ಷ: ಜಗತ್ತಿನ ಅತಿದೊಡ್ಡ ಆಶ್ಚರ್ಯ ಯಾವುದು? 

ಯುಧಿಷ್ಠಿರ: ಪ್ರತಿದಿನವೂ ಸಾವಿರಾರು ಪ್ರಾಣಿಗಳು ಯಮನ ಮನೆಗೆ ಹೋಗುತ್ತಿರುವುದನ್ನು ಕಂಡರೂ, ಉಳಿದವರು ತಮಗೆ ಸಾವೇ ಇಲ್ಲ ಎಂಬಂತೆ ಶಾಶ್ವತವಾಗಿ ಬದುಕಲು ಬಯಸುತ್ತಾರಲ್ಲವೇ? ಇದಕ್ಕಿಂತ ದೊಡ್ಡ ಆಶ್ಚರ್ಯ ಇನ್ನೊಂದಿಲ್ಲ.

ಯಕ್ಷ: ದಾರಿ ಯಾವುದು? ಸುದ್ದಿ ಯಾವುದು? 

ಯುಧಿಷ್ಠಿರ: ಋಷಿಗಳೂ ಏಕಾಭಿಪ್ರಾಯ ಹೊಂದಿಲ್ಲ, ತರ್ಕಕ್ಕೆ ಅಂತ್ಯವಿಲ್ಲ. ಆದ್ದರಿಂದ ಮಹಾಪುರುಷರು ನಡೆದ ಹಾದಿಯೇ ದಾರಿ. ಈ ಜಗತ್ತೆಂಬ ಕಡಾಯಿಯಲ್ಲಿ ಕಾಲವೆಂಬ ಸೌಟಿನಿಂದ ಪ್ರಾಣಿಗಳನ್ನು ಬೇಯಿಸುತ್ತಿರುವುದೇ ನಿಜವಾದ ಸುದ್ದಿ.

ಯುಧಿಷ್ಠಿರನ ಧರ್ಮನಿಷ್ಠೆ ಮತ್ತು ಅಂತಿಮ ಪರೀಕ್ಷೆ

ಯುಧಿಷ್ಠಿರನ ಎಲ್ಲ ಉತ್ತರಗಳಿಂದ ಯಕ್ಷನು ಸಂಪೂರ್ಣವಾಗಿ ತೃಪ್ತನಾಗುತ್ತಾನೆ. ಆಗ ಯಕ್ಷನು ಹೇಳುತ್ತಾನೆ: ರಾಜನೇ, ನೀನು ಧರ್ಮದ ಪ್ರತೀಕ. ನಿನ್ನ ಪಾಂಡಿತ್ಯಕ್ಕೆ ನಾನು ಮೆಚ್ಚಿದ್ದೇನೆ. ನಿನ್ನ ಮೃತ ಸೋದರರಲ್ಲಿ ಒಬ್ಬನನ್ನು ನಾನು ಬದುಕಿಸುತ್ತೇನೆ, ಯಾರನ್ನು ಆರಿಸಿಕೊಳ್ಳುವೆ?”

ಯುಧಿಷ್ಠಿರನು ಕ್ಷಣವೂ ಯೋಚಿಸದೆ ನಕುಲನನ್ನು ಬದುಕಿಸುವಂತೆ ಕೋರುತ್ತಾನೆ. ಯಕ್ಷನು ಆಶ್ಚರ್ಯಚಕಿತನಾಗಿ ಕೇಳುತ್ತಾನೆ: ಸಾವಿರಾರು ಆನೆಗಳ ಬಲವಿರುವ ಭೀಮನನ್ನಾಗಲಿ ಅಥವಾ ಶ್ರೇಷ್ಠ ಬಿಲ್ಲುಗಾರ ಅರ್ಜುನನನ್ನಾಗಲಿ ಕೇಳದೆ, ಮಲತಾಯಿ ಮಾದ್ರಿಯ ಮಗನಾದ ನಕುಲನನ್ನು ಏಕೆ ಆರಿಸಿಕೊಂಡೆ?”

ಅದಕ್ಕೆ ಯುಧಿಷ್ಠಿರನು ನೀಡಿದ ಉತ್ತರ ಧರ್ಮದ ಅಮೋಘ ವ್ಯಾಖ್ಯಾನವಾಗಿತ್ತು:

ನನ್ನ ತಂದೆಗೆ ಕುಂತಿ ಮತ್ತು ಮಾದ್ರಿ ಎಂಬ ಇಬ್ಬರು ಪತ್ನಿಯರು. ನಾನು ಕುಂತಿಯ ಮಗನಾಗಿ ಬದುಕಿದ್ದೇನೆ. ಮಾದ್ರಿ ತಾಯಿಯ ಸಂತಾನ ಉಳಿಯಲಿ ಎಂಬುದು ನನ್ನ ಆಸೆ. ಅತಿ ದೊಡ್ಡ ಧರ್ಮವೆಂದರೆ ಆನ್ವೃಶಂಸಂ ಪರೋ ಧರ್ಮಃ” (ಅಂದರೆ: ಕ್ರೌರ್ಯವಿಲ್ಲದಿರುವುದು ಅಥವಾ ದಯೆಯೇ ಪರಮ ಧರ್ಮ). ಆದ್ದರಿಂದ ನಕುಲನೇ ಬದುಕಲಿ.”

ಯುಧಿಷ್ಠಿರನ ಈ ನಿಷ್ಪಕ್ಷಪಾತ ಧರ್ಮಬುದ್ಧಿಯನ್ನು ಕಂಡು ಭಾವುಕನಾದ ಯಕ್ಷನು ತನ್ನ ನಿಜರೂಪವಾದ ಯಮಧರ್ಮರಾಯನಾಗಿ ಪ್ರತ್ಯಕ್ಷನಾಗುತ್ತಾನೆ. ಯುಧಿಷ್ಠಿರನ ಧರ್ಮಪಾಲನೆಯನ್ನು ಮೆಚ್ಚಿ ನಾಲ್ವರೂ ಸೋದರರಿಗೆ ಮರುಜೀವ ನೀಡುತ್ತಾನೆ. 

ಯಕ್ಷಪ್ರಶ್ನೆಯು ನಮಗೆ ಕಲಿಸುವ ಪಾಠಗಳು:

ತಾಳ್ಮೆ: ಕಷ್ಟಕಾಲದಲ್ಲಿ ಆತುರಪಡದೆ ವಿವೇಚನೆಯಿಂದ ವರ್ತಿಸಬೇಕು.

ಸಮಭಾವ: ತನ್ನವರೆಂಬ ಮಮಕಾರಕ್ಕಿಂತ ನ್ಯಾಯವೇ ದೊಡ್ಡದು.

ಅರಿವು: ಸಾವು ಖಚಿತ ಎಂಬ ಅರಿವು ನಮ್ಮನ್ನು ವಿನೀತರನ್ನಾಗಿ ಮಾಡುತ್ತದೆ.

ನೆಮ್ಮದಿ: ಆಸೆಗಳನ್ನು ಮತ್ತು ಅಹಂಕಾರವನ್ನು ತ್ಯಜಿಸುವುದೇ ಸುಖದ ಹಾದಿ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts