ಲೇಖನ- ಪ್ರಕಾಶ್ ಅಮ್ಮಣ್ಣಾಯ
ಅಧ್ಯಯನದ ದೃಷ್ಟಿಯಿಂದ ಜ್ಯೋತಿಷ್ಯವನ್ನು ನೋಡುವವರಿಗೆ ಕೆಲವು ಸಾಮ್ಯತೆ, ವೈರುಧ್ಯತೆ ತುಂಬ ಸಹಜ ಎನಿಸುವ ರೀತಿಯಲ್ಲಿ ಗೋಚರಿಸುತ್ತದೆ. ಉಡುಪಿಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹೀಗೆ ಜ್ಯೋತಿಷ್ಯವನ್ನು ಅಕೆಡಮಿಕ್ ಆದ ಆಸಕ್ತಿಯಿಂದ ನೋಡುವಂಥವರು. ಅದೇ ರೀತಿ ತಮಗೆ ಕಂಡು ಬಂದಂಥ ಫಲಿತಾಂಶವನ್ನು ಜನರ ಮುಂದೆ ಇಡುವವರು. ಈ ಲೇಖನದಲ್ಲಿ ಅಮ್ಮಣ್ಣಾಯ ಅವರು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹಾಗೂ ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾತಕದ ಮಧ್ಯೆ ಇರುವ ಸಾಮ್ಯತೆಯ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಜ್ಯೋತಿಷಿಯ ಅತಿದೊಡ್ಡ ಸವಾಲು ಏನೆಂದರೆ, ತಾನು ನಂಬಿದ ಅಧ್ಯಯನ ಹಾಗೂ ಅದರ ಫಲಿತಾಂಶವನ್ನು ನಿರ್ಭಯವಾಗಿ ಹೇಳಬಹುದಾ? ಅದರಲ್ಲಿ ನಂಬಿಕೆ ಇಡಬಹುದಾ ಎಂಬುದರಲ್ಲಿ. ಆದರೆ ಆ ಸವಾಲು ಮೀರಿ, ಪ್ರಕಾಶ್ ಅಮ್ಮಣ್ಣಾಯ ಅವರು “ಶ್ರೀಗುರೋಭ್ಯೋ.ಕಾಮ್”ಗೆ ಈ ಲೇಖನವನ್ನು ನೀಡಿದ್ದಾರೆ. ಆರಂಭದಲ್ಲಿಯೇ ಹೇಳಿದಂತೆ, ಇದು ವೈದಿಕ ಜ್ಯೋತಿಷ್ಯದಲ್ಲಿನ ಅಂಶಗಳ ಆಧಾರದಲ್ಲಿ ಮಾಡಿರುವ ವಿಶ್ಲೇಷಣೆಯೇ ವಿನಾ ಯಾರ ಮೇಲಿನ ನಂಜು, ಮತ್ಸರ ಅಥವಾ ಪೂರ್ವಗ್ರಹ ಇದರಲ್ಲಿ ಇಲ್ಲ.
1. ಶನಿ ಮತ್ತು ಗುರುವಿನ ಸಂಕೀರ್ಣ ಸಂಬಂಧ
ಜ್ಯೋತಿಷ್ಯದ ಸಿದ್ಧಾಂತಗಳ ಪ್ರಕಾರ, ಕರ್ಕಾಟಕದಲ್ಲಿ ಶನಿ ಇರುವುದು ಮತ್ತು ಆತನ ಮೇಲೆ ಷಷ್ಠಾಧಿಪತಿ ಗುರುವಿನ ಪ್ರಭಾವ ಬೀರುವುದು ಒಂದು ವಿಶಿಷ್ಟ ಸ್ಥಿತಿ. ಕರ್ಕಾಟಕ ರಾಶಿಯಿಂದ ಗಡಿಯಾರದ ರೀತಿಯಲ್ಲಿ ಎಣಿಸುತ್ತಾ ಹೋದರೆ ಆರನೇ ಮನೆ ಧನುಸ್ಸು ರಾಶಿಯಾಗುತ್ತದೆ. ಆ ರಾಶಿಯ ಅಧಿಪತಿ ಗುರು ಗ್ರಹ ಆಗುತ್ತದೆ.
- ಶನಿಗೆ ಷಷ್ಠಾಧಿಪತಿಯಾದ ಗುರುವು ಸ್ವಕ್ಷೇತ್ರಗತನಾಗಿದ್ದರೆ ಅಥವಾ ಶನಿಯಿಂದ ತೃತೀಯದಲ್ಲಿದ್ದರೆ, ವ್ಯಕ್ತಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡುತ್ತದೆ.
- ಒಂದು ವೇಳೆ ಶನಿಯು ದುರ್ಬಲನಾಗಿದ್ದು, ಷಷ್ಠಾಧಿಪತಿ ಗುರುವಿನ ಪೂರ್ಣ ವೀಕ್ಷಣೆ ಅವನ ಮೇಲಿದ್ದರೆ, ವ್ಯಕ್ತಿಯಲ್ಲಿ ‘ನನಗಿಂತ ಬಲಿಷ್ಠರು ಯಾರೂ ಇಲ್ಲ’ ಎಂಬ ಅಹಂಭಾವ ಬೆಳೆಯುವ ಸಾಧ್ಯತೆ ಇರುತ್ತದೆ. ಇದು ಪೂರ್ವಾಪರ ಜ್ಞಾನದ ಕೊರತೆಗೆ ಮತ್ತು ವಿವೇಚನಾ ರಹಿತ ನಿರ್ಧಾರಗಳಿಗೆ ದಾರಿ ಮಾಡಿಕೊಡಬಹುದು.
2. ಅಡಾಲ್ಫ್ ಹಿಟ್ಲರ್: ಜಾತಕ ವಿಶ್ಲೇಷಣೆ
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ನ ಜೀವನ ಮತ್ತು ಅಂತ್ಯವು ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಚರ್ಚಿತ ವಿಷಯವಾಗಿದೆ.
- ಜನ್ಮ ವಿವರ: 20 ಏಪ್ರಿಲ್ 1889, ಸಂಜೆ 6:30.
- ಲಗ್ನ ಮತ್ತು ರಾಶಿ: ತುಲಾ ಲಗ್ನ ಮತ್ತು ಧನು ರಾಶಿ.
- ನಕ್ಷತ್ರ: ಪೂರ್ವಾಷಾಢ, 1ನೇ ಪಾದ.
- ಗ್ರಹಗಳ ಸ್ಥಿತಿ: ಹಿಟ್ಲರ್ ಜಾತಕದಲ್ಲಿ ಶನಿಯು ಕರ್ಕಾಟಕ ರಾಶಿಯಲ್ಲಿ (ಆಶ್ಲೇಷ ನಕ್ಷತ್ರ) ಸ್ಥಿತನಾಗಿದ್ದನು. ರವಿ, ಮಂಗಳ, ಬುಧ ಮತ್ತು ಶುಕ್ರರು ಮೇಷ ರಾಶಿಯಲ್ಲಿದ್ದರು.
- ಅಂತ್ಯದ ವಿಶ್ಲೇಷಣೆ: ಹಿಟ್ಲರ್ನ ಅಂತ್ಯವು ರಾಹು ದಶಾಕಾಲದಲ್ಲಿ ಸಂಭವಿಸಿತು. ರಾಹುವು ಖರದ್ರೇಕ್ಕಾಣಾಧಿಪತಿ ಗುರುವಿನ ನಕ್ಷತ್ರವಾದ ಪುನರ್ವಸುವಿನಲ್ಲಿ ಇರುವಾಗಲೇ ಮರಣ ಫಲ ನೀಡಿದನು. ಅತಿಯಾದ ಮಹತ್ವಾಕಾಂಕ್ಷೆ ಮತ್ತು ಜಗತ್ತೇ ಎದುರು ಬಿದ್ದ ಸ್ಥಿತಿಯಲ್ಲಿ ಆತ ಆತ್ಮಹತ್ಯೆಗೆ ಶರಣಾದ.
3. ಡೊನಾಲ್ಡ್ ಟ್ರಂಪ್: ಜಾತಕ ವಿಶ್ಲೇಷಣೆ
ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜಾತಕದಲ್ಲೂ ಕೆಲವು ಸಾಮ್ಯತೆಗಳು ಕಂಡುಬರುತ್ತವೆ.
- ಜನ್ಮ ವಿವರ: 14 ಜೂನ್ 1946, ಬೆಳಿಗ್ಗೆ 10:54.
- ಲಗ್ನ ಮತ್ತು ರಾಶಿ: ಸಿಂಹ ಲಗ್ನ ಮತ್ತು ವೃಶ್ಚಿಕ ರಾಶಿ.
- ನಕ್ಷತ್ರ: ಜ್ಯೇಷ್ಠಾ, 4ನೇ ಪಾದ.
- ಗ್ರಹಗಳ ಸ್ಥಿತಿ: ಟ್ರಂಪ್ ಅವರ ಜಾತಕದಲ್ಲೂ ಶನಿಯು ಕರ್ಕಾಟಕ ರಾಶಿಯಲ್ಲಿದ್ದಾನೆ (ಶುಕ್ರನೊಂದಿಗೆ ಲಗ್ನದಿಂದ 12ನೇ ಮನೆಯಲ್ಲಿ). ಚಂದ್ರ ಮತ್ತು ಕೇತು ವೃಶ್ಚಿಕದಲ್ಲಿದ್ದರೆ, ರವಿ ಮತ್ತು ರಾಹು ವೃಷಭ ರಾಶಿಯಲ್ಲಿದ್ದಾರೆ.
- ಸದ್ಯದ ಸ್ಥಿತಿ: ಟ್ರಂಪ್ಗೆ ಈಗ ಅಷ್ಟಮಾಧಿಪತಿಯ ದಶೆ ನಡೆಯುತ್ತಿದೆ. ಸಿಂಹ ಲಗ್ನ ಜಾತಕದವರಿಗೆ ಲಗ್ನಾಷ್ಟಮ ಶನಿಯ ಗೋಚಾರವು ಕಷ್ಟಕರವೆಂದು ಪರಿಗಣಿಸಲಾಗುತ್ತದೆ. ರಾಹು-ಬೃಹಸ್ಪತಿ ಸಂಧಿಕಾಲದಲ್ಲಿ ಆದ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಗೋಚಾರದ ಕುಜನು ಮೀನ ರಾಶಿಗೆ ಪ್ರವೇಶಿಸಿದಾಗ ಅಪಾಯದ ಸಾಧ್ಯತೆ ಹೆಚ್ಚಿರುವುದರಿಂದ ಎಚ್ಚರಿಕೆ ಅಗತ್ಯ.
ಲಗ್ನಕ್ಕೆ ಅಷ್ಟಮಾಧಿಪತಿ ದಶೆ ಅಂದರೆ, ಸಿಂಹ ಲಗ್ನಕ್ಕೆ ಎಂಟನೇ ಮನೆಯ ಅಧಿಪತಿ, ಮೀನ ರಾಶಿಯ ಗುರು ಆಗುತ್ತದೆ.
ರಾಶಿಚಕ್ರದ ಕರಾಳ ಮುಖ: ಯಾವ ರಾಶಿಯವರ ಕ್ರಿಮಿನಲ್ ಸೈಕಾಲಜಿ ಹೇಗಿರುತ್ತದೆ?
ಗೋಚಾರದ ಅಪಾಯ ಮತ್ತು ಟ್ರಂಪ್ ಭವಿಷ್ಯ
ಡೊನಾಲ್ಡ್ ಟ್ರಂಪ್ ಅವರ ಜಾತಕದಲ್ಲಿ ಆಯುಷ್ಯ ಕಾರಕನಾದ ಶನಿಯು 0 ಡಿಗ್ರಿಯಲ್ಲಿದ್ದು ಅತ್ಯಂತ ದುರ್ಬಲನಾಗಿದ್ದಾನೆ. ಸಿಂಹ ಲಗ್ನದಲ್ಲಿ ಜನಿಸಿದ ಇವರಿಗೆ ಪ್ರಸ್ತುತ ಲಗ್ನಾಷ್ಟಮದಲ್ಲಿ ಶನಿಯ ಸಂಚಾರವು ಅತ್ಯಂತ ಕಷ್ಟಕರ ಕಾಲವನ್ನು ಸೂಚಿಸುತ್ತದೆ.
ಗಮನಾರ್ಹ ಅಂಶ: ರಾಹು ಮತ್ತು ಬೃಹಸ್ಪತಿಯ ಸಂಧಿಕಾಲದಲ್ಲೇ ಇವರ ಮೇಲೆ ಗುಂಡಿನ ದಾಳಿ ನಡೆದದ್ದನ್ನು ನಾವು ಗಮನಿಸಬಹುದು. ಇನ್ನು ಮುಂದೆ ಗೋಚಾರದ ಕುಜನು ಮೀನ ರಾಶಿಗೆ ಪ್ರವೇಶಿಸಿದಾಗ ಇವರಿಗೆ ಪ್ರಾಣಾಪಾಯ ಅಥವಾ ದೊಡ್ಡ ಮಟ್ಟದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಜನ್ಮಜಾತಕದಲ್ಲಿನ ಲಗ್ನಕ್ಕೆ ಮೀನರಾಶಿಯಲ್ಲಿ ಇರುವ ಗೋಚರದ ಶನಿ ಅಷ್ಟಮವಾಗುತ್ತದೆ ಹಾಗೂ ಅಲ್ಲಿಗೆ ಕುಜನ ಯುತಿಯೂ ಆಗುತ್ತದೆ.

ಇತಿಹಾಸದ ಪಾಠ ಮತ್ತು ಕರ್ಮ ಸಿದ್ಧಾಂತ
ಇತಿಹಾಸದಲ್ಲಿ ಟಿಪ್ಪು ಸುಲ್ತಾನನ ಅಂತ್ಯವೂ ಶನಿಯ ಸಂಚಾರದ (ಅರ್ಧಾಷ್ಟಮ ಶನಿ) ಕಾಲದಲ್ಲೇ ಸಂಭವಿಸಿತು. ರಾವಣ ಮತ್ತು ದುರ್ಯೋಧನರ ಉದಾಹರಣೆಗಳು ತೋರಿಸುವಂತೆ, ಅತಿಯಾದ ಸ್ವಾರ್ಥ ಮತ್ತು ಅಹಂಕಾರವು ಎಂತಹ ಬಲಿಷ್ಠರನ್ನೂ ಪತನದತ್ತ ತಳ್ಳುತ್ತದೆ.
- ಆಯುಷ್ಯದ ಗುಟ್ಟು: ಆಯುಷ್ಯವನ್ನು ಬ್ರಹ್ಮನು ಮೊದಲೇ ನಿರ್ಧರಿಸುವುದಿಲ್ಲ; ಬದಲಾಗಿ ಮನುಷ್ಯನು ತನ್ನ ಕಾರ್ಯಗಳ ಮೂಲಕ ಅದನ್ನು ರೂಪಿಸಿಕೊಳ್ಳುತ್ತಾನೆ. “ಮಾಡಬಾರದ್ದನ್ನು ಮಾಡುತ್ತಾ ಹೋದಾಗ ಆಯುಕ್ಷೀಣವಾಗುತ್ತದೆ” ಎಂಬುದು ಶಾಸ್ತ್ರದ ಮಾತು. ಅದಕ್ಕಾಗಿಯೇ ಸಜ್ಜನರ ಸಹವಾಸ ಮತ್ತು ಸನ್ಮಾರ್ಗದ ನಡವಳಿಕೆಗೆ ಮಹತ್ವ ನೀಡಲಾಗಿದೆ.
ಕೊನೆಮಾತು
ಗ್ರಹಗಳ ಪ್ರಭಾವವನ್ನು ನಂಬಲಿ ಅಥವಾ ಬಿಡಲಿ, ಅವುಗಳ ಪರಿಣಾಮವು ಅನಿವಾರ್ಯ. ಅತಿಯಾದ ಮಹತ್ವಾಕಾಂಕ್ಷೆ ಮತ್ತು ವಿವೇಚನಾ ರಹಿತ ನಡವಳಿಕೆಯು ಅಂತಿಮವಾಗಿ ವ್ಯಕ್ತಿಯ ಅವನತಿಗೆ ಕಾರಣವಾಗುತ್ತದೆ ಎಂಬುದು ಜ್ಯೋತಿಷ್ಯ ಮತ್ತು ಇತಿಹಾಸ ಎರಡೂ ನೀಡುವ ಎಚ್ಚರಿಕೆಯಾಗಿದೆ.
ನಿರೂಪಣೆ- ಶ್ರೀನಿವಾಸ ಮಠ





